ರಾಜಕೀಯ ಸಂಸ್ಕೃತಿ ಎಂದರೆ ಕೇವಲ ಮಾನವೀಯತೆಯ ವಿರುದ್ಧ ನಡೆಯುವುದೇ? ಒಂದು ವೇಳೆ ರಾಜಕೀಯ ವ್ಯಕ್ತಿ ಸಂಕಟದಲ್ಲಿ ಸಿಕ್ಕಿ ಬಿದ್ದಾಗ, ಮಾನವೀಯತೆಯನ್ನು ತ್ಯಜಿಸಿ ಸಂತೋಷ ಪಡುವುದು, ಕುಣಿದಾಡುವುದು, ಲಾಡು ಹಂಚುವುದು ಸರಿಯೇ?
ಪ್ರವಾದಿ ಮಹ್ಮದ್ರವರು ಮಾನವ ಕೋಟಿಗೆ ಒಂದು ಸಂದೇಶ ಕೊಟ್ಟಿದ್ದಾರೆ. `ನಿಮ್ಮ ಸಹೋದರನ ಸಂಕಟಕಾಲದಲ್ಲಿ ಸಂತೋಷ ಪಡಬೇಡಿ. ದೇವರು ಇದನ್ನು ಒಪ್ಪುವುದಿಲ್ಲ. ದೇವರು ಸಂಕಟದಲ್ಲಿರುವ ವ್ಯಕ್ತಿಗೆ ಅನುಕಂಪ ತೋರಿಸಬಹುದು ಮತ್ತು ನಿಮ್ಮನ್ನು ಸಂಕಟದಲ್ಲಿ ಸಿಕ್ಕಿಸಬಹುದು.~ ಈ ಸಂದೇಶವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಡೆಯಬೇಕು.
ಮದರ್ ತೆರೇಸಾರವರು ಒಂದು ಮಾತು ಹೇಳಿದ್ದಾರೆ, `ನೀವು ನಿಮ್ಮ ಸಹೋದರನ ಸಂತೋಷದಲ್ಲಿ ಭಾಗಿಯಾದರೆ ಅವರ ಸಂತೋಷ ಇನ್ನೂ ಹೆಚ್ಚಾಗುವುದು. ಹಾಗೆಯೇ ಅವರ ಕಷ್ಟದಲ್ಲಿ ಭಾಗಿಯಾದರೆ ಅವರ ನೋವಿನಲ್ಲೂ ಭಾಗಿಯಾದರೆ, ಅವರ ಕಷ್ಟ ಮತ್ತು ನೋವು ಕಮ್ಮಿಯಾಗುವುದು.~
ಹಿಂದು ಧರ್ಮ ಶಾಸ್ತ್ರಗಳಲ್ಲೂ ಈ ಮಾತು ಕಂಡು ಬರುವುದು. ಮಾನವೀಯತೆಗೆ ಮಾನ್ಯತೆ ಸಿಗುವುದು.
ಇಂದಿನ ನಮ್ಮ ರಾಜಕಾರಣಿಗಳು ಈ ಧರ್ಮಶಾಸ್ತ್ರಗಳ ಕಡೆ ಗಮನ ಕೊಡಬೇಕು. ಅಧಿಕಾರದ ಗರ್ವ, ದರ್ಪ ಅವರಿಗೆ ಒಳ್ಳೆಯದನ್ನು ಮಾಡುವುದಿಲ್ಲ. ತಮ್ಮ ವಿರೋಧಿಗಳ ಕಷ್ಟ, ನೋವು ತಮಗೂ ಒಂದು ದಿವಸ ಬರಬಹುದೆಂಬ ಭೀತಿ ಹೃದಯದಲ್ಲಿ ನಾಟಿರಬೇಕು.