ಆಗಾಗ್ಗೆ ಕಾಣದಂತೆ ಮಾಯವಾಗುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ನೆರವಿಗೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಧಾವಿಸಿದ್ದಾರೆ. ಅವರು ಉತ್ತರ ಪ್ರದೇಶ ರಾಜ್ಯದಾದ್ಯಂತ ಸಂಚರಿಸಿ ಪಕ್ಷಕ್ಕೆ ಚ್ಯೆತನ್ಯ ನೀಡಲಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ಸಿಗರು ನಿರಾಳರಾಗುವಂತೆ ಮಾಡಿದೆ.
ವಂಶರಾಜಕಾರಣದ ಬಂಧನದಲ್ಲಿ ಗಟ್ಟಿಯಾಗಿ ಸಿಲುಕಿರುವ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ಸಿಗರು ದಯನೀಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಕಳೆಗುಂದಿರುವ ಪಕ್ಷಕ್ಕೆ ಪುನಶ್ಚೇತನ ನೀಡಲು ಪ್ರಿಯಾಂಕಾ ಎಷ್ಟು ಸಫಲರಾಗಬಹುದೆಂಬುದನ್ನು ಕಾದು ನೋಡಬೇಕು.
ಪಕ್ಷದ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು ಕಾಂಗ್ರೆಸ್ ಮುಖಂಡರಿಗೆ ಅತಿ ದೊಡ್ಡ ಸವಾಲೆನಿಸತೊಡಗಿದೆ. ಅಲ್ಪಸಂಖ್ಯಾತರ ಅತಿಯಾದ ಓಲೈಕೆ, ಮಧ್ಯಮ ವರ್ಗದ ಬಗೆಗೆ ದಿವ್ಯ ನಿರ್ಲಕ್ಷ, ದುರ್ಬಲ ನಾಯಕತ್ವ, ಹಗರಣಗಳ ಸರಮಾಲೆ, ದೂರವಾಗುತ್ತಿರುವ ಮಿತ್ರ ಪಕ್ಷಗಳು ಪಕ್ಷವನ್ನು ಕಂಗೆಡಿಸಿವೆ.
ಪಕ್ಷ ಗೆಲುವು ಸಾಧಿಸಿದಾಗ ಶ್ರೇಯಸ್ಸಿನ ವಿಜಯಮಾಲೆಯನ್ನು ಸೋನಿಯಾ ಹಾಗೂ ರಾಹುಲ್ ಅವರಿಗೆ ತೊಡಿಸಲು ಉತ್ಸುಕತೆ ತೋರುವ ಕಾಂಗ್ರೆಸ್ ನಾಯಕರು, ಸೋಲಿನ ಹೊಣೆಗಾರಿಕೆಯನ್ನೂ ಮುಲಾಜಿಲ್ಲದೆ ರಾಷ್ಟ್ರೀಯ ನಾಯಕರ ಹೆಗಲಿಗೆ ವರ್ಗಾಯಿಸಿಬಿಡುತ್ತಾರೆ.
ಬಿಜೆಪಿ, ಸಮಾಜವಾದಿ ಪಕ್ಷ, ಬಿಎಸ್ಪಿ ನಡುವೆ ಹಂಚಿ ಹೋಗಿರುವ ಮತಗಳನ್ನು ಸೆಳೆಯಲು, ಇಂದಿರಾ ಗಾಂಧಿಯವರನ್ನು ಹೋಲುವ ಪ್ರಿಯಾಂಕಾರನ್ನು ಮುಂಚೂಣಿಗೆ ತಂದರಷ್ಟೇ ಸಾಲದು. ರಾಜ್ಯಗಳಲ್ಲಿ ಸ್ಥಳೀಯ ನಾಯಕತ್ವವನ್ನು ಬಲಪಡಿಸುವುದು ಸಹ ಅತ್ಯಗತ್ಯ. ಗಂಭೀರ ವಿಮರ್ಶೆಗೆ ತನ್ನನ್ನು ತಾನು ಒಡ್ಡಿಕೊಂಡು ಸಮಕಾಲೀನ ಜನರ ಆಶೋತ್ತರಗಳ ಜೊತೆಗೆ ತನ್ನನ್ನು ಗುರುತಿಸಿಕೊಳ್ಳುವ ಗಂಭೀರ ಪ್ರಯತ್ನದಿಂದ ಮಾತ್ರ ಕಾಂಗ್ರೆಸ್ ಪಕ್ಷದ ಪುನಶ್ಚೇತನ ಸಾಧ್ಯ.