ಮುಜರಾಯಿ ಇಲಾಖೆಗೆ ಸೇರಿದ ಹಿಂದೂ ಧಾರ್ಮಿಕ ದೇವಾಲಯಗಳ ಅರ್ಚಕರ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮ ಪಡಿಸದಿದ್ದರೆ, ದೇವಾಲಯಗಳನ್ನು ಬಂದ್ ಮಾಡುವುದಾಗಿ ತತ್ಸಂಬಂಧಿತವಾದ ವ್ಯಕ್ತಿಗಳು ಮೈಸೂರಿನ ಸಮಾರಂಭವೊಂದರಲ್ಲಿ ಬೆದರಿಕೆಯನ್ನೊಡ್ಡಿದ್ದಾರೆ (ವರದಿ: ಪ್ರಜಾವಾಣಿ, ಜೂ. 21) ಇದೊಂದು ಸ್ವಾಗತಾರ್ಹ ಕ್ರಮವೇ ಸರಿ.
ನಿರ್ಜೀವ ದೇವಾಲಯಗಳಲ್ಲಿ ಪೂಜಾರಿಗಳು ಬಣ ಬಣ ಮಂತ್ರ ಹೇಳುತ್ತ, ಭಣ ಭಣಗುಟ್ಟುವ ಬದುಕನ್ನು ಬದುಕುವುದಕ್ಕಿಂತ ಬೇರೆ ಯಾವುದಾದರೂ ಸಾರ್ಥಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮೇಲು. ಅದೇ ರೀತಿ ಮಸೀದಿ, ಚರ್ಚ್, ಬಸ್ತಿ ಈ ಮುಂತಾದವುಗಳಿಗೂ ಬೀಗ ಹಾಕಿ ಆಯಾ ಧರ್ಮದ ದೇವರುಗಳು ಮೆಚ್ಚುವಂಥ, ಶ್ರಮಸಹಿತವಾದ ಕಾಯಕದಲ್ಲಿ ತತ್ಸಂಬಂಧಿತವಾದ ವ್ಯಕ್ತಿಗಳು ತೊಡಗಿಸಿಕೊಳ್ಳುವುದು ಮೇಲು.
ಹೇಗಿದ್ದರೂ ಕುವೆಂಪು ಅವರು `ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ~ ಎಂದು ಎಪ್ಪತ್ತು ವರ್ಷಗಳ ಹಿಂದೆಯೇ ಸಾರಿದ್ದಾರೆ ಆದರೆ, ಹಾಗೆಯೇ ಬಿಟ್ಟು ಬರಬೇಡಿ, ಅವುಗಳ ಬಾಗಿಲಿಗೆ ಬೀಗ ಹಾಕಿ ಬನ್ನಿ.