ಅನಂತಮೂರ್ತಿಯವರ ಸಾವಿನಿಂದ ಲಕ್ಷಾಂತರ ಅಭಿಮಾನಿಗಳಲ್ಲಿ ಅನಾಥ ಭಾವವೊಂದನ್ನು ಹುಟ್ಟುಹಾಕಿದೆ. ಆದರೆ ಅವರ ಸಾವನ್ನೂ ಕೂಡ ಸಂಭ್ರಮಿಸಿದ ಮನಸುಗಳದ್ದು ಅದೆಂಥಾ -ವಿಕೃತ ಮನಸ್ಥಿತಿ! ಇಂಥವರನ್ನು ಸೃಷ್ಟಿಸಿದ ಆ ಧರ್ಮದ ವಕ್ತಾರರೆಂಬಂತೆ ವರ್ತಿಸುವ ಹಿರಿಯರು ಈ ಬಗ್ಗೆ ಗಾಢವಾಗಿ ಯೋಚಿಸಬೇಕು.
ಏಕೆಂದರೆ ಹಿಂದೂ ಮತ ಅತ್ಯಂತ ವಿಶಾಲ ಮನೋಧರ್ಮದ ಮತ. ಇಲ್ಲಿ ಆಸ್ತಿಕತೆಯೂ ಇದೆ. ನಾಸ್ತಿಕತೆಯೂ ಇದೆ. ಗೊಡ್ಡು ಆಚರಣೆಗಳೂ ಇವೆ. ವೈಜ್ಞಾನಿಕ ದೃಷ್ಟಿಕೋನಗಳೂ ಇವೆ. ವೈಜ್ಞಾನಿಕವಾದ ನೂರಾರು ಆಚರಣೆಗಳು ಬರುಬರುತ್ತಾ ಗೊಡ್ಡಾಗಿ ಮಾರ್ಪಟ್ಟವೂ ಇವೆ. ವಿವೇಚಿಸುವ, ವಿಷಯದಾಳಕ್ಕಿಳಿವ, ಆಚರಣೆಗಳ ಹಿಂದಿನ ಉದ್ದೇಶವನ್ನು ಅರಿಯುವ ಮನಸ್ಥಿತಿಗಳು ಕುರುಡಾಗುತ್ತಾ, ಬರಿದೇ ಶಾಸ್ತ್ರಕ್ಕಾಗಿ ಆಚರಿಸುವವರೆ ಒಂದು ಧರ್ಮದಲ್ಲಿ ತುಂಬುತ್ತಾ ಹೋದಂತೆ ಆಗುವ ಅಪಾಯಗಳಿಗೆ ಸಾಕ್ಷಿಯೇ ಈ ಕೊಳೆತ ಮನಸ್ಸುಗಳು ಹಾಗೂ ಅವುಗಳ ಸೃಷ್ಟಿಕರ್ತರು. ನಿಜವಾದ ಹಿಂದೂ ಮತಾನುಯಾಯಿ ಹೀಗೆಲ್ಲಾ ಮಾಡಲಾರ.