‘ಸಾಹಿತಿಗಳ ಚಿತ್ರ ಹರಿದ ಕಿಡಿಗೇಡಿಗಳು’ ತಲೆಬರಹದ ಸಂಗತಿ (ಪ್ರವಾ ಏ.8) ಅತ್ಯಂತ ದುರುಳತನದ್ದು. ಬೆಂಗಳೂರಿನ ಶಂಕರಮಠ ಸಮೀಪ ಹಾಕಲಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಫಲಕದಲ್ಲಿದ್ದ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರ ಚಿತ್ರಗಳನ್ನು ಹರಿದು ಹಾಕಿರುವುದು ಖಂಡನೀಯ.
ಇದಕ್ಕೆ ಕಾರಣ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿರುವುದು. ಸಾಹಿತಿಗಳು ರಾಜಕೀಯ ಪಕ್ಷವೊಂದಕ್ಕೆ ತಮ್ಮ ಬೆಂಬಲವನ್ನು ಸೂಚಿಸುವುದು ಇತರರೆಲ್ಲರಿಗಿಂತಲೂ ಜವಾಬ್ದಾರಿಯುತವಾದುದು. ಸಾಹಿ-ತಿಗಳು ವರ್ತಮಾನದ ಪ್ರಚಲಿತ ವಿದ್ಯಮಾನಗಳಿಗೆ ಪ್ರಬುದ್ಧ ರೀತಿಯಲ್ಲಿ ದನಿಯಾಗಬೇಕಾದ ಅವಶ್ಯಕತೆಯೂ ಇದೆ.
ತಮ್ಮ ನಿಲುವಿಗೆ ಸರಿದೋರುವಂಥ, ಯಾವ ರಾಜಕೀಯ ಪಕ್ಷವನ್ನಾದರೂ ಬೆಂಬಲಿಸುವ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗಿದ್ದೇ ಇದೆ. ಇದು ಯಾವುದೇ ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಗಳಿಗೂ ಅನ್ವಯವಾಗುವ ಸಂಗತಿ.
ಶಂಕರಪುರದಲ್ಲಿ ರಾಜಕೀಯ ದುರುದ್ದೇಶದಿಂದ ಮಾಡಿದ ಅವಮಾನ, ಕೇವಲ ಮೂರು ಮಂದಿ ಜ್ಞಾನಪೀಠ ಪ್ರಶಸ್ತಿ ವಿಜೇತರಿಗೆ ಮಾತ್ರವಲ್ಲ ಆರು ಕೋಟಿ ಕನ್ನಡಿಗರಿಗೆ ಮತ್ತು ಅವರ ಸಾಹಿತ್ಯಕ್ಕೆ ಮಾಡಿದ ಅಕ್ಷಮ್ಯ ಅಪರಾಧ. ಇದನ್ನು ಕನ್ನಡಪರ ಸಂಘಟನೆಗಳು ಪ್ರತಿಭಟಿಸಬೇಕಾಗಿದೆ.