ಕಾಸ್ಗಂಜ್(ಉತ್ತರ ಪ್ರದೇಶ): ಗಣರಾಜ್ಯೋತ್ಸವ ದಿನದಂದು ಎರಡು ಕೋಮಿನ ಗುಂಪುಗಳ ನಡುವೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸ್ಗಂಜ್ ಜಿಲ್ಲಾ ಪೊಲೀಸರು 81 ಜನರನ್ನು ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ ಎರಡೂ ಧರ್ಮಗಳ ಬಂಧಿತರ ಕುಟುಂಬದವರು ಒಟ್ಟಾಗಿ ಸೇರಿ ಬಿಡುಗಡೆಗೆ ಆಗ್ರಹಿಸಿದರು. ಇದು ಮಾನವೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಕುರಿತು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಹೆಚ್ಚಿನವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಬಂಧನಕ್ಕೊಳಗಾಗಿರುವ ಎರಡೂ ಧರ್ಮದವರ ಕುಟುಂಬದವರು ಬಿಡುಗಡೆಗಾಗಿ ಆಗ್ರಹಿಸಿ ಠಾಣೆ ಎದುರು ಜಮಾಯಿಸಿದ್ದಾರೆ.
ಸದ್ಯ ಈ ಸಂಬಂಧ ಬಂಧನಕ್ಕೊಳಗಾಗಿರುವ ರೈಲ್ವೆ ಪಾಠಕ್ ಕಾಲೊನಿಯ ಕೂಲಿ ಕಾರ್ಮಿಕ ಮತೀನ್ ಖಾನ್(27) ಅವರ ತಾಯಿ ಜಮೀನಿ ಬೇಗಂ ಹಾಗೂ 18 ವರ್ಷದ ಹಿಂದೂ ಯುವಕ ಜೋಗಿಂದರ್ ಅವರ ತಾಯಿ ರಮಾದೇವಿ ಅವರು ಅಕ್ಕಪಕ್ಕದಲ್ಲಿ ಕುಳಿತು ತಮ್ಮ ಮಕ್ಕಳ ಬಿಡುಗಡೆಗಾಗಿ ಆಗ್ರಹಿಸಿದರು.