ಕೋಲಾರ: ಇಲ್ಲಿನ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ರಮೇಶ್ ಎಂಬುವವರು ಬುಧವಾರ ವಿಚಾರಣೆ ವೇಳೆ ನ್ಯಾಯಾಧೀಶರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಾಲ್ಲೂಕಿನ ಬೆಟ್ಟ ಬೆಣಜೇನಹಳ್ಳಿಯ ರಮೇಶ್ ಮೂರು ವರ್ಷದ ಹಿಂದೆ ರಾಜೇಶ್ವರಿ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ರಾಜೇಶ್ವರಿ ವಿಚ್ಛೇದನ ಕೋರಿ 2017ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ಕಾರಣ ದಂಪತಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ‘ಮದ್ಯವ್ಯಸನಿಯಾದ ಪತಿ ನಿತ್ಯ ಪಾನಮತ್ತರಾಗಿ ಕಿರುಕುಳ ಕೊಡುತ್ತಾರೆ. ದಯವಿಟ್ಟು ವಿಚ್ಛೇದನ ಕೊಡಿಸಿ’ ಎಂದು ರಾಜೇಶ್ವರಿ ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ಜೇಬಿನಲ್ಲಿ ವಿಷದ ಬಾಟಲಿ ಇಟ್ಟುಕೊಂಡು ಬಂದಿದ್ದ ರಮೇಶ್ ಅವರು ಪತ್ನಿಯ ಹೇಳಿಕೆಯಿಂದ ಬೇಸರಗೊಂಡು ನ್ಯಾಯಾಧೀಶರ ಎದುರೇ ವಿಷ ಸೇವಿಸಿದರು.
ನಂತರ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.