ಹದಿನಾಲ್ಕು ವರ್ಷಗಳ ಹಿಂದಿನ ಮಾತು. ಆಗ ಚಿತ್ರದುರ್ಗ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ. ಲಭ್ಯವಿದ್ದ ಕೊಳವೆಬಾವಿ ನೀರಿನಲ್ಲಿ ಮಿತಿ ಮೀರಿದ ಫ್ಲೋರೈಡ್ ಅಂಶ. ಬಿಂದಿಗೆ ಸಿಹಿ ನೀರಿಗೂ ಎರಡು–-ಮೂರು ಕಿ.ಮೀ. ಅಲೆದಾಡಬೇಕಾದ ಸ್ಥಿತಿ. ಇಲ್ಲದಿದ್ದರೆ ಕೇಳಿದಷ್ಟು ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸುವ ಅನಿವಾರ್ಯ.
ನಗರದ ಸುಲೋಚನಾ ಬಸವರಾಜು ಅವರನ್ನೂ ನೀರಿನ ಸಮಸ್ಯೆ ಬಾಧಿಸಿತ್ತು. ಸಮಸ್ಯೆ ನಿವಾರಣೆಗೆ ಪರಿಹಾರ ತಿಳಿಯಲಿಲ್ಲ. ಆದರೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ ‘ಮಳೆ ನೀರು ಸಂಗ್ರಹ ವಿಧಾನ’ ಅವರ ನೆರವಿಗೆ ಬಂತು. ಚಾವಣಿ ಮೇಲೆ ಸುರಿಯುವ ಮಳೆ ನೀರನ್ನು ತಮ್ಮದೇ ವಿಧಾನದಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಆರಂಭಿಸಿದರು. ಆದರೆ ಆ ನೀರು ಹೆಚ್ಚು ಕಾಲ ಉಳಿಯುತ್ತಿರಲಿಲ್ಲ. ಅಂತಿಮವಾಗಿ ಜಲತಜ್ಞ ಎನ್. ದೇವರಾಜ ರೆಡ್ಡಿ ನೆರವಿನೊಂದಿಗೆ ವೈಜ್ಞಾನಿಕವಾಗಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಂಡರು.
ಮನೆಯ ಪಡಸಾಲೆಯ ಕೆಳಗೆ 52 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿದರು. ಆ ವರ್ಷ ಭರ್ಜರಿ ಮಳೆ. ಟ್ಯಾಂಕ್ ಭರ್ತಿಯಾಯಿತು. ಅದರಿಂದಲೇ ವರ್ಷದ ಮುಕ್ಕಾಲುಪಾಲು ಜೀವನ ಸಾಗಿತು. ಮೊದಲ ವರ್ಷದ ಯಶಸ್ಸು, ಮಿನರಲ್ ವಾಟರ್ನಂತಿದ್ದ ಮಳೆ ನೀರಿನ ಗುಣಮಟ್ಟಕ್ಕೆ ಮನಸೋತ ಸುಲೋಚನಾ ದಂಪತಿ, ಅಕ್ಕಪಕ್ಕದ ಮನೆಗಳ ಚಾವಣಿ ನೀರನ್ನೂ ಬಳಸಲು ಆರಂಭಿಸಿದರು. ಈಗ ತಮ್ಮ ಮನೆಯ ಅಕ್ಕಪಕ್ಕದ ಮೂರು ಮನೆಗಳ ಚಾವಣಿ ಮೇಲೆ ಸುರಿಯುವ ಮಳೆ ನೀರನ್ನೂ ಸಂಗ್ರಹಿಸುತ್ತಿದ್ದಾರೆ. ಆಗಿನಿಂದ ಅವರ ಮನೆಯ ‘ರೇನ್ ಟ್ಯಾಂಕ್’ ಬರಿದಾಗಲೇ ಇಲ್ಲ!
ಚಿತ್ರದುರ್ಗ ನಗರದಲ್ಲಿ ಮಳೆ ನೀರು ಸಂಗ್ರಹದ ಇಂಥ ನೂರಾರು ಯಶೋಗಾಥೆಗಳು ತೆರೆದುಕೊಳ್ಳುತ್ತವೆ. ಪ್ರತಿ ಯಶೋಗಾಥೆಯ ಹಿಂದೆಯೂ ನೀರಿನ ಸಮಸ್ಯೆಯ ವ್ಯಥೆ ಇರುತ್ತದೆ.
ದೇವರಾಜ ರೆಡ್ಡಿ ಪ್ರಕಾರ, ‘2000 ಇಸವಿಯಿಂದ ಈಚೆಗೆ ಚಿತ್ರದುರ್ಗ ನಗರದಲ್ಲಿ 1200ಕ್ಕೂ ಹೆಚ್ಚು ಮನೆ, ಶಾಲಾ ಕಾಲೇಜು, ಮಠ, ಮಂದಿರ, ಸರ್ಕಾರಿ ಕಚೇರಿ, ಆಸ್ಪತ್ರೆಗಳಿಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲಾಗಿದೆ. 500ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಇವತ್ತಿಗೂ ಮಳೆ ನೀರು ಬಳಕೆ ಆಗುತ್ತಿದೆ. ಉಳಿದ ಕಡೆ ಮಳೆ ನೀರನ್ನು ಕೊಳವೆಬಾವಿಗೆ ಇಂಗಿಸುವ ಪ್ರಯತ್ನ ಮುಂದುವರಿದಿದೆ. ಶಾಂತಿಸಾಗರದ ನೀರು ನಗರಕ್ಕೆ ಪೂರೈಕೆಯಾದ ಮೇಲೆ ಹೊಸ ಪ್ರಯತ್ನಗಳು ಕಡಿಮೆಯಾಗಿವೆ’ ಎಂದು ರೆಡ್ಡಿ ಹೇಳುತ್ತಾರೆ.
ಈ ಅಭಿಯಾನ, ಸರ್ಕಾರದ ಕಾನೂನು ಕಟ್ಟಾಜ್ಞೆಗಳಿಂದ ನಡೆದಿಲ್ಲ. ತಾವು ಅನುಭವಿಸಿದ ನೀರಿನ ಬವಣೆ, ಶುದ್ಧವಲ್ಲದ ನೀರಿನಿಂದ ಎದುರಿಸಿದ ರೋಗ-ರುಜಿನಗಳು ಇಲ್ಲಿನ ಜನರನ್ನು ಮಳೆ ನೀರು ಬಳಕೆಗೆ ಪ್ರೇರೇಪಿಸಿವೆ. ಇಂಥ ಯಶೋಗಾಥೆಗಳನ್ನು ಗುರುತಿಸಿ ಜನರಿಗೆ ತಲುಪಿಸಿರುವ ಸ್ಥಳೀಯ ಆಕಾಶವಾಣಿಯಂತಹ ಮಾಧ್ಯಮಗಳ ಕೆಲಸವೂ ಅಭಿಯಾನದಲ್ಲಿ ಸೇರಿದೆ.
ಮಾತಿನಿಂದ ಕೃತಿಗೆ!: ಹದಿಮೂರು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದಾಗ ಜಿಲ್ಲಾ ಆಡಳಿತವು ‘ಜಲ ಜಾಗೃತಿ’ ಕುರಿತು ಅಭಿಯಾನಗಳನ್ನು ಆಯೋಜಿಸಿತ್ತು. ಒಣಭಾಷಣಗಳಿಂದ ಪ್ರಯೋಜನವಾಗದು ಎಂದು ಭಾವಿಸಿ ಅಂದಿನ ಜಿಲ್ಲಾಧಿಕಾರಿ ಸೀತಾರಾಂ ಅವರು, ‘ಮಾತನಾಡುವುದಕ್ಕಿಂತ ಮಾಡಿ ತೋರಿಸುವುದು ಲೇಸು’ ಎಂಬಂತೆ ತಾವು ವಾಸವಿದ್ದ ಸರ್ಕಾರಿ ಬಂಗಲೆಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದರು. ಜಿಲ್ಲಾಧಿಕಾರಿ ಅವರ ಈ ಪ್ರಯತ್ನ ಯಶಸ್ವಿಯಾಯಿತು.
ನಂತರ ಜಿಲ್ಲಾಧಿಕಾರಿಯಾಗಿ ಬಂದ ಎಸ್.ಎ.ಸಾದಿಕ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಇಡೀ ಜಿಲ್ಲಾ ಆಡಳಿತ ಕಚೇರಿಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದರು. ಅದಕ್ಕೆ ‘ಜಲ ಸಂಜೀವಿನಿ’ ಎಂದು ಹೆಸರಿಟ್ಟರು. ಜಿಲ್ಲಾ ಆಡಳಿತ ಕಚೇರಿಯೊಂದಕ್ಕೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದ್ದು ರಾಜ್ಯದಲ್ಲಿ ಇದೇ ಮೊದಲು. ‘ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಲು ಇದು ಪ್ರೇರಣೆಯಾಯಿತು’ ಎನ್ನುತ್ತಾರೆ ದೇವರಾಜ ರೆಡ್ಡಿ.
ದುರ್ಗದ ಜಿಲ್ಲಾಧಿಕಾರಿ ಕಚೇರಿ ಮೇಲೆ ಸುರಿಯುವ ಮಳೆ ನೀರು, ಏಳು ಲಕ್ಷ ಲೀಟರ್ ಸಾಮರ್ಥ್ಯದ ಸಂಪ್ ಟ್ಯಾಂಕ್ನಲ್ಲಿ ಸಂಗ್ರಹವಾಗುತ್ತದೆ. ಕಚೇರಿ ಅಂಗಳದ ಕೊಳವೆಬಾವಿಗೆ ಜಲ ಮರುಪೂರಣ ವ್ಯವಸ್ಥೆ ಮಾಡಿಸಲಾಗಿದೆ. ಜಿಲ್ಲಾ ಆಡಳಿತ ಕಚೇರಿಯಲ್ಲಿ ಬಹುತೇಕ ಕೆಲಸಗಳಿಗೆ ಮಳೆ ನೀರನ್ನೇ ಬಳಸಲಾಗುತ್ತಿದೆ. ಜಿಲ್ಲಾ ಆಡಳಿತದ ಈ ಪ್ರಯತ್ನ, ನಗರದ ಎಲ್ಲ ಸರ್ಕಾರಿ ಕಚೇರಿಗಳಿಗೂ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲು ಉತ್ತೇಜಕವಾಯಿತು. ಹಲವು ಖಾಸಗಿ ಕಟ್ಟಡಗಳಿಗೂ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲು ಪ್ರೇರಣೆಯಾಯಿತು.
ಮಠ- ಮಾನ್ಯಗಳ ಪ್ರಚಾರ: ಚಿತ್ರದುರ್ಗದ ರಾಘವೇಂದ್ರ ಮಠದಲ್ಲಿ ಪ್ರತಿ ವರ್ಷ ರಾಯರ ಆರಾಧನೆ ವೇಳೆ ನೀರು ಪೂರೈಸಲು ಹರಸಾಹಸಪಡಬೇಕಾಗಿತ್ತು. ಒಂದು ಹಂತದಲ್ಲಿ ಹಿರಿಯ ಸ್ವಾಮೀಜಿ, ದುರ್ಗದಲ್ಲಿ ನೀರಿನ ಸಮಸ್ಯೆ ನಿವಾರಣೆ ಆಗುವವರೆಗೂ ಮಠಕ್ಕೆ ಬರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿತ್ತು. ಆಗ ದೇವರಾಜ ರೆಡ್ಡಿ, ಭಕ್ತರೊಬ್ಬರ ಮನವೊಲಿಸಿ, ಮಠದ ನೀರಿನ ಸಂಕಷ್ಟ ನಿವಾರಣೆಗೆ ನೆರವಾದರು. ತಾವೇ ಮುಂದೆ ನಿಂತು, ಮಠದ ಬಾವಿಗೆ ಮಳೆ ನೀರು ಸಂಗ್ರಹವಾಗುವಂತೆ ವ್ಯವಸ್ಥೆ ಮಾಡಿದರು. ಆ ವರ್ಷದ ಅಲ್ಪಮಳೆಗೆ ಬಾವಿಯೂ ತುಂಬಿತು, ಬಾವಿಯೊಳಗಿದ್ದ ಕೊಳವೆಬಾವಿಯೂ ಪುನರುಜ್ಜೀವನ ಪಡೆಯಿತು.
ಮರು ವರ್ಷ ಮಠಕ್ಕೆ ಬಂದ ಮಂತ್ರಾಲಯ ಯತಿಗಳು ಅಲ್ಲಿ ಸಂಗ್ರಹವಾಗಿದ್ದ ಮಳೆ ನೀರಿನ್ನೇ ಸ್ನಾನಕ್ಕೆ ಬಳಸಿದರು, ಮಳೆ ನೀರನ್ನೇ ತೀರ್ಥವಾಗಿ ವಿತರಿಸಿದರು. ಅದಕ್ಕೆ ‘ಗಂಗಾ ಯೋಜನೆ’ ಎಂದು ಹೆಸರಿಟ್ಟರು. ಈ ಪ್ರಯತ್ನ ಮಠದ ಭಕ್ತರಿಗೂ ತಮ್ಮ ಮನೆಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆಗೆ ಪ್ರೇರಣೆಯಾಯಿತು ಎನ್ನುತ್ತಾರೆ ಮಠದ ವ್ಯವಸ್ಥಾಪಕ ಫಣಿರಾಜ್.
ಇಂಥದೇ ಬವಣೆ ನಿವಾರಣೆಗೆ ನಗರದ ಮೆದೇಹಳ್ಳಿಯ ರಾಮತೀರ್ಥ ಆಶ್ರಮದಲ್ಲೂ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲಾಗಿದೆ. ಇಲ್ಲಿ ಪ್ರತಿ ಹುಣ್ಣಿಮೆಯಲ್ಲಿ 500 ರಿಂದ 600 ಮಂದಿ ಇವತ್ತಿಗೂ ಮಳೆ ನೀರು ಕುಡಿಯುತ್ತಿದ್ದಾರೆ, ಬಳಸುತ್ತಿದ್ದಾರೆ. ರಾಯರ ಮಠ ಮತ್ತು ರಾಮತೀರ್ಥ ಆಶ್ರಮದಲ್ಲಾಗಿರುವ ಈ ಪ್ರಯತ್ನ ಸುತ್ತಲಿನ ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ನೆರೆಹೊರೆಯವರು ಹೇಳುತ್ತಾರೆ.
ಹಳ್ಳಿಗಳಿಗೆ ವಿಸ್ತರಣೆ: ನಗರದಲ್ಲಿನ ಮಳೆ ನೀರು ಸಂಗ್ರಹದ ಯಶೋಗಾಥೆಗಳು ಹಂತ ಹಂತವಾಗಿ ಹಳ್ಳಿಗಳಿಗೂ ತಲುಪಿದವು. ರೈತರು ಜಮೀನಿನಲ್ಲಿ ಬರಿದಾದ ಕೊಳವೆಬಾವಿಗಳಿಗೆ ಜಲಮರುಪೂರಣಕ್ಕೆ ಮುಂದಾದರು. ಆದರೆ ಅನೇಕರಿಗೆ ಹಣಕಾಸಿನ ಸಮಸ್ಯೆ ಎದುರಾಯಿತು. ಇದನ್ನು ಅರಿತ ಗ್ರಾಮೀಣ ಬ್ಯಾಂಕ್ ಈ ವಿಧಾನ ಅಳವಡಿಸಿಕೊಳ್ಳುವವರಿಗೆ ಸಾಲ ನೀಡಲು ಮುಂದಾಯಿತು. ಈ ಪ್ರಯತ್ನ ಯಶಸ್ವಿಯಾಗಿ ಜಿಲ್ಲೆಯಲ್ಲಿ 2000ಕ್ಕೂ ಹೆಚ್ಚು ಮಂದಿಗೆ ಬ್ಯಾಂಕ್ ಸಾಲ ವಿತರಿಸಿದೆ. ಜನರ ಆಸಕ್ತಿಯ ಫಲವಾಗಿ ಆಗಿರುವ ಇಂತಹ ಪ್ರಯತ್ನಗಳು ಇತರರಿಗೆ ಮಾದರಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.