ಐತರಾಸನಹಳ್ಳಿ ಗ್ರಾಮ ಪಂಚಾಯಿತಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ವೈಶಾಲಿಯವರು ಬರುವ ಹೊತ್ತಿಗೆ ಈ ಪಂಚಾಯಿತಿ ಸಾಕಷ್ಟು ‘ಪ್ರಖ್ಯಾತ’ವೇ ಆಗಿತ್ತು. ಕೋಲಾರ ಜಿಲ್ಲೆಯ ಅತಿ ಸೂಕ್ಷ್ಮ ಗ್ರಾಮ ಪಂಚಾಯಿತಿಗಳಲ್ಲಿ ಇದೂ ಒಂದು ಎಂದು ಎಲ್ಲರೂ ಹೇಳಿದ್ದರು. ಹೊಸ ಕೆಲಸದ ಜೊತೆಗೆ ಹೊಸ ಭಯಗಳೂ ಇರುತ್ತವೆ ಎಂದುಕೊಂಡೇ ಅವರು ಕೆಲಸ ಆರಂಭಿಸಿದರು. ಆಗಲೇ ಕಾಡಲಾರಂಭಿಸಿದ್ದು ದೊಡ್ಡ ಪ್ರಶ್ನೆ. ಉದ್ಯೋಗಖಾತ್ರಿ ಯೋಜನೆಯ ಜಾಬ್ ಕಾರ್ಡ್ಗಳು ಎಷ್ಟು ಮಂದಿ ಕೂಲಿಗಳ ಬಳಿ ಇವೆ? ಎಷ್ಟು ಕಾರ್ಡ್ಗಳು ಗುತ್ತಿಗೆದಾರರ ಬಳಿ ಇವೆ? ಅಸಲಿಗೆ ಎಷ್ಟು ಜಾಬ್ ಕಾರ್ಡ್ಗಳು ವಿತರಣೆಯಾಗಿವೆ? ಎಷ್ಟು ಮಂದಿ ಎಷ್ಟು ಕಾಮಗಾರಿಗಳಲ್ಲಿ ಕೆಲಸ ಮಾಡಿದ್ದಾರೆ?
ವೈಶಾಲಿ ಸಾಗರ್ ಎಂಬ 25ರ ಈ ಬಿ.ಎ. ಪದವೀಧರ ಯುವತಿಗೆ ಈ ಪ್ರಶ್ನೆಗಳಿಗೆ ದೊರೆತ ಉತ್ತರ ವಿಚಿತ್ರವಾಗಿತ್ತು. ದಾಖಲೆಗಳನ್ನೆಲ್ಲಾ ತಡಕಾಡಿದಾಗ ಐತರಾಸನಹಳ್ಳಿ ಪಂಚಾಯಿತಿಯಲ್ಲಿ ಈವರೆಗೂ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ವಿತರಿಸಲಾದ ಜಾಬ್ ಕಾರ್ಡ್ಗಳೆಷ್ಟೆಂಬ ಮಾಹಿತಿಯೇ ಇರಲಿಲ್ಲ. 2400 ಜನಸಂಖ್ಯೆ ಇರುವ ಪಂಚಾಯಿತಿ ವ್ಯಾಪ್ತಿಯ 12 ಹಳ್ಳಿಗಳಲ್ಲಿ ವಿತರಿಸಲಾಗಿರುವ ಜಾಬ್ ಕಾರ್ಡ್ಗಳು ಇರಬೇಕಾದವರ ಬಳಿಯೇ ಇಲ್ಲದಿರುವುದು ವೈಶಾಲಿ ಅವರನ್ನು ಅಚ್ಚರಿಗೆ ನೂಕಿತು. ಗುತ್ತಿಗೆದಾರರು ಕೊಟ್ಟ 100 ರೂಪಾಯಿಗೆ ಜಾಬ್ ಕಾರ್ಡ್ಗಳನ್ನು ಮಾರಿಕೊಂಡ ಹಲವರೂ ಕಾಣಿಸಿದರು. ಅದನ್ನು ಬಾಯಿ ಬಿಟ್ಟು ಹೇಳಿದರು. ಕೆಲವರ ಬಳಿ ಎರಡೆರಡು ಜಾಬ್ ಕಾರ್ಡ್ಗಳಿರುವುದು ಬೆಳಕಿಗೆ ಬಂತು. ಭಿನ್ನ ಧರ್ಮದ ಹೆಸರುಳ್ಳವರು ಒಂದೇ ಕುಟುಂಬದ ನಿವಾಸಿಗಳೆಂಬ ದಾಖಲೆಗಳನ್ನೂ ಜಾಬ್ ಕಾರ್ಡ್ಗಳು ಹೇಳುತ್ತಿದ್ದವು. ಪಂಚಾಯಿತಿಯಲ್ಲಿ ಎರಡು ವರ್ಷದಿಂದ ಕ್ಯಾಷ್ ಬುಕ್ ನಿರ್ವಹಣೆಯನ್ನೇ ಮಾಡದಿರುವುದು ಬೆಳಕಿಗೆ ಬಂತು. ಜನರಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳ ಬಗ್ಗೆಯೇ ನಂಬಿಕೆ ಕುಸಿದಿತ್ತು.
ಪದವಿ ಪಡೆದು ಏವಿಯೇಷನ್ನಲ್ಲಿ ಡಿಪ್ಲೊಮೊ ಮಾಡಿ ನಗರದಲ್ಲಿ ದೊರೆಯಬಹುದಾಗಿದ್ದ ಹೈಫೈ ಕೆಲಸಗಳನ್ನೆಲ್ಲಾ ಬಿಟ್ಟು ಗ್ರಾಮ ಮಟ್ಟದಲ್ಲಿ ಅಧಿಕಾರಿಯಾಗಿ ಕೆಲಸ–ಸೇವೆ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬಂದ ಯುವತಿಯ ಮುಂದೆ ಇಂಥ ಅಯೋಮಯವಾದ ಗ್ರಾಮ ಪಂಚಾಯಿತಿ ಲೋಕವೊಂದು ತೆರೆದುಕೊಂಡಿತ್ತು. ‘ಎಲ್ಲವೂ ಹೇಗಿದೆಯೋ ಹಾಗೇ ಇರಲಿ ಎಂದು ಸುಮ್ಮನೇ ದಿನ ನೂಕಿದರೆ ನಿಮಗೇ ಒಳ್ಳೆಯದು. ಎಲ್ಲವನ್ನೂ ಸರಿಪಡಿಸುವ ಉಸಾಬರಿಯನ್ನು ಹೊತ್ತರೆ ನೀವು ನಿಮ್ಮ ನೆಮ್ಮದಿ ಕೆಡಿಸಿಕೊಳ್ಳೋದು ಗ್ಯಾರಂಟಿ’ ಎಂಬ ಸಲಹೆಗಳು ಸಾಕಷ್ಟು ದೊರೆತವು. ಇವುಗಳನ್ನೆಲ್ಲಾ ಕೇಳಿಸಿಕೊಂಡಂತೆ ಮಾಡಿದ ವೈಶಾಲಿ ಏನಾದರೂ ಮಾಡಿ ಪಂಚಾಯಿತಿ ಆಡಳಿತ ಮತ್ತು ಕಾರ್ಯವೈಖರಿಯನ್ನು ಕೈಲಾದ ಮಟ್ಟಿಗೆ ಸರಿದಾರಿಗೆ ತರುವ ನಿರ್ಧಾರ ಮಾಡಿದ್ದರ ಪರಿಣಾಮವೇ ಜಾಬ್ ಕಾರ್ಡ್
ಪರಿಷ್ಕರಣೆ ಆಂದೋಲನ.
ಜಾಬ್ ಕಾರ್ಡ್ಗಳ ಅಯೋಮಯ ಸ್ಥಿತಿಯನ್ನು ಸರಿಪಡಿಸಲು ಹೀಗೊಂದು ಜಾಬ್ ಕಾರ್ಡ್ ಪರಿಷ್ಕರಣೆ ಆಂದೋಲನ ನಡೆಸುವುದು ಅಗತ್ಯ ಎನ್ನಿಸಿದೆ. ಅನುಮತಿ ಕೊಡಿ ಎಂದು ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ವಿನೋತ್ ಪ್ರಿಯಾ ಅವರನ್ನು ಕೋರಿದರು. ಚರ್ಚೆಯ ಬಳಿಕ ಅನುಮತಿ ದೊರಕಿತು. ಆಮೇಲಿನದ್ದು ಮತ್ತೊಂದು ಸಾಹಸ. ಕಂದಾಯ ಅದಾಲತ್ ಮೂಲಕ ರಾಜ್ಯದ ಗಮನ ಸೆಳೆದಿರುವ ಕೋಲಾರ ಜಿಲ್ಲೆಯು ಪೋಡಿ ಆಂದೋಲನಕ್ಕೆ ಸಿದ್ಧತೆ ನಡೆಸುತ್ತಿದೆ. ಇದೇ ವೇಳೆಯಲ್ಲಿಯೇ, ಉದ್ಯೋಗಖಾತ್ರಿ ಯೋಜನೆಯ ಜಾಬ್ ಕಾರ್ಡ್ ಪರಿಷ್ಕರಣೆಯ ಆಂದೋಲನವನ್ನು ಐತರಾಸನಹಳ್ಳಿ ಗ್ರಾಮ ಪಂಚಾಯಿತಿಯೊಂದು ಸದ್ದಿಲ್ಲದೆ ಶುರು ಮಾಡಿತು.
ಈ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯಾಗಿ ಬರಲು ಬಹುತೇಕರು ಹೆದರುತ್ತಿರುವ ಸನ್ನಿವೇಶದಲ್ಲೇ ಬಂದ ವೈಶಾಲಿಯವರು ಜಿಲ್ಲಾ ಪಂಚಾಯಿತಿಯ ಸಹಕಾರ ಪಡೆದು ಉದ್ಯೋಗಖಾತ್ರಿ ಜಾಬ್ ಕಾರ್ಡ್ ಪರಿಶೀಲನೆ, ಪರಿಷ್ಕರಣೆಯ ಆಂದೋಲನಕ್ಕೆ ಗ್ರಾಮದ ಸತ್ಯಮ್ಮ ದೇವಾಲಯದಲ್ಲಿ ಜುಲೈ 10ರಂದು ಚಾಲನೆ ನೀಡಿದರು. ಅಧ್ಯಕ್ಷೆ ನಾಗಮಣಿ, ಉಪಾಧ್ಯಕ್ಷೆ ವನಿತಾ, ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ರಾಜಣ್ಣ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ, ಹಳೆಯ ಜಾಬ್ ಕಾರ್ಡ್ಗಳನ್ನು ಈ ಮುಂಚೆ ದುಡ್ಡಿಗೆ ಮಾರಿಕೊಂಡಂತೆ ಹೊಸ ಕಾರ್ಡ್ಗಳನ್ನು ಮಾರಿಕೊಳ್ಳಬಾರದು ಎಂಬ ನಿರ್ಧಾರವನ್ನೂ ಗ್ರಾಮಸ್ಥರು ಮಾಡಿದ್ದಕ್ಕೆ ಸತ್ಯಮ್ಮ ದೇವಿ ಸಾಕ್ಷಿಯಾದಳು. 2009ರಿಂದ ಇಲ್ಲಿವರೆಗೆ ಖಾತ್ರಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರಗಳಿಂದಲೇ ಗಮನ ಸೆಳೆಯುತ್ತಿರುವ ಕೋಲಾರ ಜಿಲ್ಲೆಯು ಈಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರ ಕೆಲಸದ ಪರಿಣಾಮವಾಗಿ ಬೇರೆ ರೀತಿ ಗಮನ ಸೆಳೆಯುತ್ತಿದೆ.
ಅಭಿಯಾನಕ್ಕೆ ಶಾಲಾ ಮಕ್ಕಳು: ತಾಲ್ಲೂಕಿನ ಐತರಾಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಹಳ್ಳಿಗಳಲ್ಲಿ ಆಂದೋಲನ ಜುಲೈ 24ರವರೆಗೂ ನಡೆಯಲಿದೆ. ಅದಕ್ಕಾಗಿ ಅವರು ಆಯಾ ಗ್ರಾಮದ ಶಾಲೆಯ ವಿದ್ಯಾರ್ಥಿಗಳ ನೆರವನ್ನೂ ಪಡೆದಿರುವುದು ವಿಶೇಷ. ಆಂದೋಲನ ನಡೆಯುವ ಹಿಂದಿನ ದಿನ ಗ್ರಾಮದಲ್ಲಿ ಡಂಗುರ ಹೊಡೆಸುವುದು ಸಾಮಾನ್ಯ. ಅದರೊಂದಿಗೆ ಶಾಲೆಗೆ ಭೇಟಿ ನೀಡುವ ವೈಶಾಲಿ ಅಲ್ಲಿನ ಮಕ್ಕಳಿಗೆ ಜಾಬ್ ಕಾರ್ಡ್ ಪರಿಷ್ಕರಣೆ ಕುರಿತು ವಿವರಿಸಿ, ಆ ಬಗ್ಗೆ ಪೋಷಕರಿಗೆ ತಿಳಿಸುವಂತೆ ಹೇಳುತ್ತಾರೆ. ಮನೆಯಲ್ಲಿ ಮಕ್ಕಳಿಂದ ಮಾಹಿತಿ ಪಡೆದ ಪೋಷಕರು ಪರಿಷ್ಕರಣಾ ಕಾರ್ಯ ನಡೆಯುವ ಸ್ಥಳಕ್ಕೆ ಬರುತ್ತಾರೆ.
ಜಾಬ್ ಕಾರ್ಡ್ಗಳ ಮಾನ್ಯತೆ ಐದು ವರ್ಷದವರೆಗೂ ಇರಬೇಕು ಎಂಬುದು ನಿಯಮ. ಆದರೆ ಖಾತ್ರಿ ಯೋಜನೆ ಜಾರಿಗೆ ಬಂದಾಗಿನಿಂದಲೂ ಈ ನಿಯಮ ಜಾರಿಯಾಗಲೇ ಇಲ್ಲ. ಆದರೆ ಈಗ ಪರಿಷ್ಕರಣಾ ಕ್ರಿಯೆ ನಡೆಸುತ್ತಿರುವುದರಿಂದ ಎಷ್ಟು ಮಂದಿಯ ಬಳಿ ಕಾರ್ಡ್ ಇದೆ ಅಥವಾ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆಂದೋಲನ ಪೂರ್ಣಗೊಂಡ ಬಳಿಕ ನಿಜವಾದ ಕಾರ್ಡುದಾರರ ಅಂಕಿ ಅಂಶಗಳು ಲಭ್ಯವಾಗಲಿವೆ ಎಂಬ ಭರವಸೆಯೂ ಅವರಲ್ಲಿದೆ.
ಮೊದಲ ದಿನ ಪಂಚಾಯಿತಿ ಕೇಂದ್ರದ ಸತ್ಯಮ್ಮ ದೇವಾಲಯದಲ್ಲಿ ಆಂದೋಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕೆಲವರು ಗಲಾಟೆ ಮಾಡಬಹುದು ಎಂಬ ಆತಂಕವೊಂದು ಮೂಡಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ. ಬದಲಿಗೆ ಹಳ್ಳಿಯ ಹಲವು ಜನ ಬಂದು ಫಾರ್ಮ್ ನಂ 1ನ್ನು ಸಲ್ಲಿಸಿದರು. ಇಂಥದೊಂದು ಕೆಲಸ ಇನ್ನೂ ಮುಂಚೆ ನಡೆಯಬೇಕಿತ್ತು ಎಂದು ಹೇಳಿದರು. ಶುಭ ಸೂಚನೆ ಎಂಬಂತೆ ಸಂಜೆ ವೇಳೆಗೆ ಮಳೆಯೂ ಬಂತು ಎಂದು ನಕ್ಕರು ವೈಶಾಲಿ. ಪಂಚಾಯಿತಿಗೆ ಜನ ಬರಲಾರಂಭಿಸಿದ್ದಾರೆ. ಪಂಚಾಯಿತಿ ಬಗ್ಗೆ ಅವರಲ್ಲಿ ವಿಶ್ವಾಸ ಕುಡಿಯೊಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.