ಅಫ್ಗಾನಿಸ್ತಾನ ತಂಡದ ನಾಯಕ ನಾಯಕ ರಶೀದ್ ಖಾನ್ ಮತ್ತು ಗುಲ್ಬದೀನ್ ನೈಬ್ –ಎಪಿ/ಪಿಟಿಐ ಚಿತ್ರ
ಅಫ್ಗಾನಿಸ್ತಾನ ತಂಡದ ಆಟಗಾರರ ವಿಜಯೋತ್ಸವ –ಪಿಟಿಐ ಚಿತ್ರ
ಅಫ್ಗಾನಿಸ್ತಾನದಲ್ಲಿ ಜನರು ತಮ್ಮ ದೇಶದ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದರಿಂದ ಸಂಭ್ರಮ ಆಚರಿಸಿದರು –ಎಎಫ್ಪಿ ಚಿತ್ರ
ಸೂಪರ್ 8ರಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾ ವಿರುದ್ಧ ಜಯಿಸಿದ ಅಫ್ಗಾನಿಸ್ತಾನ ಮಳೆ ಅಡ್ಡಿ, ಡಿಎಲ್ಎಸ್ ನಿಯಮ ಅನ್ವಯ ಅಫ್ಗಾನಿಸ್ತಾನದಲ್ಲಿ ಬೀದಿಗಿಳಿದು ಸಂಭ್ರಮಿಸಿದ ಜನರು
‘ಅಫ್ಗಾನಿಸ್ತಾನದ ಯುವ ಸಮುದಾಯಕ್ಕೆ ಪ್ರೇರಣೆ‘
ಕಿಂಗ್ಸ್ಟೌನ್ (ಪಿಟಿಐ): ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ತಂಡದ ಸಾಧನೆಯು ದೇಶದ ಯುವಜನತೆಗೆ ಪ್ರೇರಣೆಯಾಗಲಿದೆ ಎಂದು ಅಫ್ಗಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಹೇಳಿದ್ದಾರೆ. ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸೆಮಿಫೈನಲ್ ಪಂದ್ಯವು ಬಹಳ ದೊಡ್ಡ ಪ್ರೇರಣಾದಾಯಿಯಾಗಲಿದೆ. 19 ವರ್ಷದೊಳಗಿನವರ ಟೂರ್ನಿಯಲ್ಲಿ ಈ ಸಾಧನೆಯನ್ನು ನಮ್ಮ ತಂಡದವರು ಮಾಡಿದ್ದರು. ಈ ಟೂರ್ನಿಯಲ್ಲಿ ನಾವು ಸೂಪರ್ 8 ಹಂತ ಪ್ರವೇಶಿಸಿದ್ದೇ ಚೊಚ್ಚಲ ಸಲ. ಇದೀಗ ಸೆಮಿಗೆ ಲಗ್ಗೆ ಇಟ್ಟಿದ್ದು ಬಹುದೊಡ್ಡ ಸಾಧನೆಯಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. ತಂಡವು ಗೆದ್ದ ಕೂಡಲೇ ಸಹ ಆಟಗಾರರು ನಾಯಕ ರಶೀದ್ ಅವರನ್ನು ಹೆಗಲ ಮೇಲೆ ಹೊತ್ತು ಇಡೀ ಕ್ರೀಡಾಂಗಣದಲ್ಲಿ ಸುತ್ತು ಹಾಕಿದರು. ಈ ತಂಡವು ಹೋದ ವರ್ಷ ಏಕದಿನ ಕ್ರಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳನ್ನೂ ಸೋಲಿಸಿತ್ತು.
ವಿವಾದಕ್ಕೆಡೆಯಾದ ನೈಬ್ ಪ್ರಹಸನ
ಕಿಂಗ್ಸ್ಟೌನ್ (ಪಿಟಿಐ): ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಅಫ್ಗಾನಿಸ್ತಾನದ ಕೋಚ್ ಜೊನಾಥನ್ ಟ್ರಾಟ್ ಅವರು ‘ಸ್ವಲ್ಪ ನಿಧಾನವಾಗಿ ಆಡಿ ಅವಸರ ಬೇಡ’ ಎಂದು ಸಂಜ್ಞೆ ಮಾಡಿದರು. ಆ ಸಂದರ್ಭದಲ್ಲಿ ಫೀಲ್ಡರ್ ಗುಲ್ಬದೀನ್ ನೈಬ್ ಅವರು ಸ್ನಾಯುಸೆಳೆತವಾಗಿದೆ ಎಂದು ಕಾಲು ಹಿಡಿದು ನೆಲಕ್ಕೊರಗಿದರು. ಈ ಪ್ರಹಸನವು ಈಗ ವಿವಾದದ ಕಿಡಿ ಹೊತ್ತಿಸಿದೆ. ಸ್ಲಿಪ್ ಸ್ಥಾನದಲ್ಲಿ ಚೆನ್ನಾಗಿಯೇ ಫೀಲ್ಡಿಂಗ್ ಮಾಡುತ್ತಿದ್ದ ನೈಬ್ಗೆ ಇದ್ದಕ್ಕಿದ್ದಂತೆ ಸ್ನಾಯುಸೆಳೆತವಾಗಿದ್ದು ಹೇಗೆ ಇದು ನಾಟಕವೇ ಎಂದು ಹಲವು ಮಾಜಿ ಆಟಗಾರರು ಪ್ರಶ್ನಿಸಿದ್ದಾರೆ. ಗುರಿ ಬೆನ್ನಟ್ಟಿದ್ದ ಬಾಂಗ್ಲಾದೇಶ ಇನಿಂಗ್ಸ್ನಲ್ಲಿ ಸ್ಪಿನ್ನರ್ ನೂರ್ ಅಹಮದ್ ಅವರು ಹಾಕಿದ 12ನೇ ಓವರ್ನಲ್ಲಿ ಈ ಘಟನೆ ನಡೆಯಿತು. ಮಳೆ ಬಂದಿದ್ದರಿಂದ ಡಿಎಲ್ಎಸ್ ನಿಯಮ ಅನ್ವಯಿಸಲಾಗಿತ್ತು. ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ್ದ ಬಾಂಗ್ಲಾ ಈ ಸಂದರ್ಭದಲ್ಲಿ 81 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ತಂಡವು ಡಿಎಎಲ್ಎಸ್ ಪಾರ್ ಸ್ಕೋರ್ಗೆ ಎರಡು ರನ್ಗಳ ಹಿನ್ನಡೆಯಲ್ಲಿತ್ತು. ‘ನಿಧಾನ ಎಂದು ಕೋಚ್ ಕಳಿಸಿದ ಸಂದೇಶವನ್ನು ಈ ರೀತಿ ಅರ್ಥ ಮಾಡಿಕೊಂಡು ಮೊದಲ ಸ್ಲಿಪ್ನಲ್ಲಿದ್ದವರು ನೆಲಕ್ಕೊರಗುವುದು ಅನವಶ್ಯಕವಾಗಿತ್ತು. ಇದು ಸ್ವೀಕಾರಾರ್ಹವೂ ಅಲ್ಲ’ ಎಂದು ಸೈಮನ್ ಡೋಲ್ ವೀಕ್ಷಕ ವಿವರಣೆಯಲ್ಲಿ ಹೇಳಿದರು. ‘ಆಸ್ಕರ್ ಏಮಿ?’ ಎಂದು ಜಿಂಬಾಬ್ವೆಯ ವೀಕ್ಷಕ ವಿವರಣೆಗಾರ ಪಾಮಿ ಎಂಬಾಗ್ವಾ (ನೈಬ್ ಅವರದ್ದು ನಟನೆಗೆ ಪ್ರಶಸ್ತಿ ಎಂಬ ವ್ಯಂಗ್ಯ) ಉದ್ಗರಿಸಿದರು. ಈ ಸಂದರ್ಭದಲ್ಲಿ ನೈಬ್ ಅವರಿಗೆ ಚಿಕಿತ್ಸೆ ನೀಡಲಾಯಿತು. ತಂಡದ ನೆರವು ಸಿಬ್ಬಂದಿಯು ಸಹ ಆಟಗಾರ ನವೀನ್ ಉಲ್ ಹಕ್ ಅವರೊಂದಿಗೆ ನೈಬ್ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ಮತ್ತೆ ಮಳೆ ಸುರಿಯಿತು. ಆಟಗರರೆಲ್ಲರೂ ಓಡಿಹೋಗಿ ಡಗ್ ಔಟ್ ಸೇರಿಕೊಂಡು. ಪಂದ್ಯದ ನಂತರ ಎಕ್ಸ್ನಲ್ಲಿ ಸಂದೇಶ್ ಹಾಕಿರುವ ನೈಬ್ ‘ಕೆಲವೊಮ್ಮೆ ಖುಷಿ ಅಥವಾ ದುಃಖ ಆದಾಗ ಈ ರೀತಿಯಾಗುತ್ತದೆ. ಸ್ನಾಯುಸೆಳೆತ’ ಎಂದು ಬರೆದಿದ್ದಾರೆ. ‘ಗುಲ್ಬದೀನ್ ನೈಬ್ಗೆ ಕೆಂಪು ಕಾರ್ಡ್’ ಎಂದು ಭಾರತದ ಕ್ರಿಕೆಟಿಗ ಅಶ್ವಿನ್ ಸಂದೇಶ ಹಾಕಿದ್ದಾರೆ.