ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶತಕ ಗಳಿಸಿದ ಮೊತ್ತ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಖ್ಯಾತಿಯ ಕನ್ನಡಿಗ ಮನೀಶ್ ಪಾಂಡೆ, ಐಪಿಎಲ್ ಭವಿಷ್ಯವೀಗ ತೂಗುಯ್ಯಾಲೆಯಲ್ಲಿದೆ.
ಪ್ರಸಕ್ತ ಸಾಗುತ್ತಿರುವ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಮನೀಶ್ ಪಾಂಡೆ, ಅವರಿಗೆ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ಸಾಧ್ಯವಾಗಲಿಲ್ಲ.
ಇದರಿಂದಾಗಿ ಸನ್ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡಲಾಗಿದೆ. ಹಾಗಾಗಿ 2021ನೇ ಸಾಲಿನಲ್ಲಿ ಎಸ್ಆರ್ಎಚ್ಗೆ ಇನ್ನೆರಡು ಪಂದ್ಯಗಳು ಮಾತ್ರ ಬಾಕಿ ಉಳಿದಿರುವಂತೆಯೇ ಮಗದೊಮ್ಮೆ ಅವಕಾಶ ಸಿಗುವುದು ಅನುಮಾನವೆನಿಸಿದೆ.
ಪ್ರಸಕ್ತ ಸಾಲಿನಲ್ಲಿ ಏಳು ಪಂದ್ಯಗಳನ್ನು ಆಡಿರುವ ಪಾಂಡೆ 37.16ರ ಸರಾಸರಿಯಲ್ಲಿ ಒಟ್ಟು 223 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ (61*) ಸೇರಿವೆ.
ಆದರೆ 114.35ರ ಸ್ಟೈಕ್ರೇಟ್ ಮಾತ್ರ ಕಾಪಾಡಿಕೊಂಡಿರುವುದು ಟೀಕೆಗೆ ಕಾರಣವಾಗಿದೆ. ನಿಧಾನಗತಿಯ ಆಟ ಹಾಗೂ ನಿರ್ಣಾಯಕ ಹಂತಗಳಲ್ಲಿ ಎಡವಿರುವುದು ಮನೀಶ್ಗೆ ಮುಳುವಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ ಆಗಲೇ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಮನೀಶ್ ಪಾಂಡೆ ಅವರ ಐಪಿಎಲ್ ಭವಿಷ್ಯಕ್ಕೂ ಕಂಟಕ ಎದುರಾಗಿದೆ.