ಡೆಹ್ರಾಡೂನ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ವಿಕೆಟ್ ಕೀಪಿಂಗ್ ಕೈಗವಸುಗಳ ಮೇಲೆ ಸೈನ್ಯದ ‘ಕಠಾರಿ ಮುದ್ರೆ’ ಹಾಕಿರುವುದಕ್ಕೆ ಸಂಬಂಧಿಸಿದ ವಿವಾದದಿಂದ ಭಾರತ ಸೇನೆ ದೂರ ಉಳಿದಿದೆ.
ದಕ್ಷಿಣ ಆಫ್ರಿಕಾ ಎದುರಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಧೋನಿ ಅವರ ಕೈಗವಸಿನಲ್ಲಿ ‘ಬಲಿದಾನ್ ಬ್ಯಾಜ್’ ಕಾಣಿಸಿಕೊಂಡಿತ್ತು. ಇದು ವಿವಾದ ಸೃಷ್ಟಿಸಿತ್ತು. ಐಸಿಸಿ, ಇದನ್ನು ತೆಗೆಸುವಂತೆ ಪಟ್ಟು ಹಿಡಿದರೆ, ಭಾರತದ ಕ್ರೀಡಾಕ್ಷೇತ್ರ ಧೋನಿ ಬೆಂಬಲಕ್ಕೆ ನಿಂತಿತ್ತು.
ಶನಿವಾರ ಇಲ್ಲಿನ ಸೈನಿಕ ಅಕಾಡೆಮಿಯಲ್ಲಿ ನಡೆದ ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡ ಲೆಫ್ಟಿಟನೆಂಟ್ ಜನರಲ್ ಚೆರಿಸ್ ಮಾತೇಸನ್ ‘ಅದು ಧೋನಿ ಅವರ ವೈಯಕ್ತಿಕ ನಿರ್ಧಾರ. ಹೀಗಾಗಿ ಸೇನೆಯು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ’ ಎಂದರು.
‘ಈ ವಿಷಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯೇ ನಿರ್ಧಾರ ಕೈಗೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
ಧೋನಿ ದೇಶಾಭಿಮಾನಿ– ಗಿರಿರಾಜ್: ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಆಟಗಾರ ಮಾತ್ರವಲ್ಲ, ಉತ್ತಮ ದೇಶಭಕ್ತ. ಇತರ ಸಿಲೆಬ್ರಿಟಿಗಳಂತೆ ಧೋನಿ ಅಗತ್ಯ ಇದ್ದಾಗ ಮಾತ್ರ ದೇಶಭಕ್ತಿ ಪ್ರದರ್ಶಿಸುವವರಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು.