ಬ್ರಿಜ್ಟೌನ್, ಬಾರ್ಬೆಡೋಸ್ : ಟೆಸ್ಟ್ ಸರಣಿಯ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು ಗುರುವಾರ ನಡೆಯಲಿರುವ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಸೂರ್ಯಕುಮಾರ್ ಯಾದವ್ ಅವರು ಲಯಕ್ಕೆ ಮರಳುವ ತವಕದಲ್ಲಿದ್ದಾರೆ. ಅಲ್ಲದೇ ವಿಕೆಟ್ಕೀಪರ್ ಸ್ಥಾನ ಗಿಟ್ಟಿಸಲು ಇಶಾನ್ ಕಿಶನ್ ಮತ್ತು ಅನುಭವಿ ಸಂಜು ಸ್ಯಾಮ್ಸನ್ ನಡುವೆ ಪೈಪೋಟಿಯೂ ಏರ್ಪಟ್ಟಿದೆ.
ಈ ಮೂರು ಪಂದ್ಯಗಳ ಸರಣಿಯನ್ನು ಮುಂಬರುವ ಏಷ್ಯಾ ಕಪ್ ಟೂರ್ನಿಯ ಸಿದ್ಧತೆಯ ವೇದಿಕೆಯನ್ನಾಗಿ ಬಳಸಿಕೊಳ್ಳುವತ್ತ ರೋಹಿತ್ ಶರ್ಮಾ ಬಳಗ ಚಿತ್ತ ನೆಟ್ಟಿದೆ. ರೋಹಿತ್, ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಅವರು ಕೂಡ ಉತ್ತಮ ಲಯದಲ್ಲಿದ್ದಾರೆ.
ಬೌಲಿಂಗ್ ವಿಭಾಗದ ಹೊಣೆಯು ಮೊಹಮ್ಮದ್ ಸಿರಾಜ್ ಮೇಲೆ ಹೆಚ್ಚು ಬೀಳಲಿದೆ. ಅವರಿಗೆ ಯುವ ಆಟಗಾರರಾದ ಉಮ್ರಾನ್ ಮಲಿಕ್, ಮುಕೇಶ್ ಕುಮಾರ್ ಜೊತೆಗಿದ್ದಾರೆ. ಸ್ಪಿನ್ ವಿಭಾಗವು ಬಲಿಷ್ಠವಾಗಿದೆ. ಹೆಚ್ಚು ಆಯ್ಕೆಗಳೂ ಇವೆ. ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ತಂಡದಲ್ಲಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಲಿರುವ ವಿಶ್ವಕಪ್ ಸಿದ್ದತೆಗೂ ಭಾರತಕ್ಕೆ ಈ ಸರಣಿಯುವ ಅಭ್ಯಾಸದ ಭಾಗವಾಗಲಿದೆ.
ಆದರೆ ವೆಸ್ಟ್ ಇಂಡೀಸ್ ತಂಡಕ್ಕೆ ಏಕದಿನ ಮಾದರಿಯಲ್ಲಿ ಪುನರುತ್ಥಾನದ ಆರಂಭಿಕ ಸರಣಿ ಇದಾಗಲಿದೆ. ಏಕೆಂದರೆ ಈ ಸಲದ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಲು ತಂಡಕ್ಕೆ ಸಾಧ್ಯವಾಗಿಲ್ಲ. ಎರಡು ಬಾರಿ ವಿಶ್ವಕಪ್ ಜಯಿಸಿರುವ ವಿಂಡೀಸ್ ಇದೇ ಮೊದಲ ಸಲ ಅನರ್ಹವಾಗಿದೆ.
ಶಾಯ್ ಹೋಪ್ ತಂಡವನ್ನು ಮುನ್ನಡೆಸಲಿದ್ದಾರೆ. ಶಿಮ್ರೊನ್ ಹೆಟ್ಮೆಯರ್ ಮತ್ತು ರೋವ್ಮನ್ ಪೊವೆಲ್ ಬಿಟ್ಟರೆ ಉಳಿದ ಬಹುತೇಕರು ಯುವ ಆಟಗಾರರಿದ್ದಾರೆ. ಭಾರತದ ಬಲಿಷ್ಠ ಬೌಲಿಂಗ್ ಪಡೆಯನ್ನು ಎದುರಿಸುವ ಸವಾಲು ಅವರ ಮುಂದಿದೆ.
ತಂಡಗಳು: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕವಾಡ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಇಶಾನ್ ಕಿಶನ್ (ವಿಕೆಟ್ಕೀಪರ್), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.
ವೆಸ್ಟ್ ಇಂಡೀಸ್: ಶಾಯ್ ಹೋಪ್ (ನಾಯಕ), ರೋವ್ಮನ್ ಪೊವೆಲ್ (ಉಪ ನಾಯಕ), ಅಲಿಕ್ ಅಥನೇಝ್, ಯಾನಿಕ್ ಕೆರೈ, ಕೀಸಿ ಕಾರ್ಟಿ, ಡಾಮ್ನಿಕ್ ಡ್ರೇಕ್ಸ್, ಶಿಮ್ರೊನ್ ಹೆಟ್ಮೆಯರ್, ಅಲ್ಜರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಕೇಶ್ ಮೋಟೀ, ಜೇಡನ್ ಸೀಲ್ಸ್, ರೊಮೆರಿಯೊ ಶೆಫರ್ಡ್, ಕೆವಿನ್ ಸಿಂಕ್ಲೆರ್, ಒಷೇನ್ ಥಾಮಸ್.
ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ: ಡಿಡಿ ಸ್ಪೋರ್ಟ್ಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.