ಬೆಂಗಳೂರು: ಮಾಜಿ ಕ್ರಿಕೆಟಿಗ, ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಿರ್ಮಾತೃ, ಜಿ. ಕಸ್ತೂರಿರಂಗನ್ (89) ಬುಧವಾರ ಚಾಮರಾಜಪೇಟೆಯಲ್ಲಿರುವ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.
1948 ರಿಂದ 63ರವರೆಗೆ ಮೈಸೂರು ರಾಜ್ಯ ತಂಡದಲ್ಲಿ ಅವರು ಮಧ್ಯಮವೇಗದ ಬೌಲರ್ ಆಗಿದ್ದರು. 1969ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಿರ್ಮಾಣದ ಉಸ್ತುವಾರಿ ವಹಿಸಿದ್ದರು. ನಂತರ 2001ರವರೆಗೆ ಅವರೇ ಕ್ಯುರೇಟರ್ ಕೂಡ ಆಗಿದ್ದರು.
ಗುಲಾಬಿ ಹೂವು ತಳಿಗಳ ಅಭಿವೃದ್ಧಿಯಲ್ಲಿಯೂ ಅವರು ತೊಡಗಿಕೊಂಡಿದ್ದರು. ಹಲವು ದೇಶಗಳಿಗೆ ಇವರ ತೋಟದಲ್ಲಿ ಬೆಳೆದ ಗುಲಾಬಿ ಹೂವುಗಳು ರಫ್ತಾಗುತ್ತವೆ.