ಮುಂಬೈ: ಕರ್ನಾಟಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಪ್ರತಿಭೆ ದೇವದತ್ತ ಪಡಿಕ್ಕಲ್ ಕನ್ನಡಿಗ ಅಥವಾ ಮಲಯಾಳಿ ಎಂಬ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಗಂಭೀರ ಚರ್ಚೆ ನಡೆಯುತ್ತಿವೆ.
ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಡಿಕ್ಕಲ್ ಚೊಚ್ಚಲ ಶತಕ ಸಾಧನೆ ಮಾಡಿದ್ದರು. ಇದರ ಬೆನ್ನಲ್ಲೇ ಕೇರಳ ಸಂಸದ ಹಾಗೂ ಕಾಂಗ್ರೆಸ್ಮುಖಂಡ ಶಶಿ ತರೂರ್, ಮಲಯಾಳಿ ಪಡಿಕ್ಕಲ್ ಶತಕ ಬಾರಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತಿರುಗೇಟು ನೀಡಿದ್ದಾರೆ.
'ಈ ವರ್ಷದ ಐಪಿಎಲ್ನಲ್ಲಿ ಎರಡೂ ಶತಕಗಳನ್ನು ಮಲಯಾಳಿಗಳು ಗಳಿಸಿರುವುದು ಎಷ್ಟೊಂದು ಸೋಜಿಗ. ಇಷ್ಟು ಕಾಲ ಕೇರಳವನ್ನು ಕ್ರಿಕೆಟ್ನ ಹಿನ್ನೀರು ಎಂದು ಪರಿಗಣಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 100ರ ಗಡಿ ದಾಟಿದ ಇಬ್ಬರು ಬ್ಯಾಟ್ಸ್ಮನ್ಗಳು ಮಲಯಾಳಿಗಳು. ಸಂಜು ಸ್ಯಾಮ್ಸನ್ ಜೊತೆ ಸೇರಿದ ದೇವದತ್ತ ಪಡಿಕ್ಕಲ್ ಅವರಿಗೆ ಅಭಿನಂದನೆಗಳು' ಎಂದು ಶಶಿ ತರೂರ್ ಬರೆದುಕೊಂಡಿದ್ದರು.
How amazing that both the centuries in this year’s #IPL have been scored by Malayalis, when Kerala has so long been regarded as a cricketing backwater! Congratulations @devdpd07 for joining @IamSanjuSamson as the only two to cross the hundred mark so far this year
— Shashi Tharoor (@ShashiTharoor) April 22, 2021
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ದೊಡ್ಡ ಗಣೇಶ್, '2016ರಲ್ಲಿ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿದ ನಂತರ ಕೆಲವರು ತಮ್ಮವರೆಂದು ವಾದಿಸಿದ್ದರು. ಅವರಿಗೆ ಸ್ಥಾನ ನಷ್ಟವಾದಾಗ ಕೈಚೆಲ್ಲಿದ್ದರು. ಈಗ ದೇವದತ್ತ ಹೆಸರಲ್ಲೂ ಅದೇ ನಡೆಯುತ್ತಿದೆ. ಅವರು ಮಲಯಾಳಿ ಎಂಬುದನ್ನು ಒಪ್ಪುತ್ತೇನೆ. ಆದರೆ ಕ್ರಿಕೆಟಿಗರಾಗಿ ಕರುಣ್ ಹಾಗೂ ದೇವದತ್ತ ಪ್ರಗತಿಯಲ್ಲಿ ಕೇರಳಕ್ಕೆ ಯಾವುದೇ ಪಾತ್ರವಿಲ್ಲ. ಅವರು ಕರ್ನಾಟಕದ ಹುಡುಗರು' ಎಂದು ಪ್ರತಿಕ್ರಿಯಿಸಿದ್ದಾರೆ.
Well, a lot of people owned Karun Nair after he scored a triple century in 2016 and disowned him after he lost his place. Now the same with Devdutt. Agree, they’re Malyalis. But, Kerala had no role in Karun & Devdutt’s progress as cricketers. They’re Karnataka boys. Period. https://t.co/LbFatnK0lg
— ದೊಡ್ಡ ಗಣೇಶ್ | Dodda Ganesh (@doddaganesha) April 22, 2021
ಮುಂಬೈನ ವಾಂಖೆಡೆ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 20 ವರ್ಷದ ದೇವದತ್ತ ಪಡಿಕ್ಕಲ್ ಚೊಚ್ಚಲ ಶತಕ ಸಾಧನೆ ಮಾಡಿದ್ದರು. ಅಲ್ಲದೆ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಮುರಿಯದ ಮೊದಲ ವಿಕೆಟ್ಗೆ 181 ರನ್ಗಳ ಜೊತೆಯಾಟ ನೀಡಿ ಆರ್ಸಿಬಿಗೆ ಸತತ ನಾಲ್ಕನೇ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.