ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 4th Test: ಅಂತಿಮ ದಿನ ಇಂಗ್ಲೆಂಡ್‌ಗೆ ಬೇಕು 291 ರನ್

Last Updated 5 ಸೆಪ್ಟೆಂಬರ್ 2021, 18:41 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಈಗ ಕುತೂಹಲ ಗರಿಗೆದರಿದೆ.

ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನನಾಲ್ಕನೇ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಭಾನುವಾರ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್ (60; 72ಎಸೆತ) ಮತ್ತು ರಿಷಭ್ ಪಂತ್ (50; 106ಎ) ಶತಕದ ಜೊತೆಯಾಟದಿಂದಾಗಿ ಭಾರತ ತಂಡಕ್ಕೆ ಗೆಲುವಿನ ಅವಕಾಶದ ಬಾಗಿಲು ತೆಗೆದಿದೆ. ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿದ್ದ ಆತಿಥೇಯ ತಂಡಕ್ಕೆ ಭಾರತವು 369 ರನ್‌ಗಳ ಸವಾಲಿನ ಗುರಿ ಒಡ್ಡಿದೆ.

ಇಂಗ್ಲೆಂಡ್ ತಂಡವು ಈ ಗುರಿಯನ್ನು ಮೀರಿ ಜಯಿಸಬೇಕಿದೆ ಅಥವಾ ಪಂದ್ಯ ಡ್ರಾ ಮಾಡಿಕೊಂಡು ಸೋಲು ತಪ್ಪಿಸಿಕೊಳ್ಳಬೇಕಿದೆ.

ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 77 ರನ್‌ ಗಳಿಸಿತ್ತು. ಹಸೀಬ್ ಹಮೀದ್‌ (ಬ್ಯಾಟಿಂಗ್‌ 43) ಮತ್ತು ರೋರಿ ಬರ್ನ್ಸ್ (ಬ್ಯಾಟಿಂಗ್‌ 31) ಕ್ರೀಸ್‌ನಲ್ಲಿದ್ದರು. ಿಂಗ್ಲೆಂಡ್ ಗೆಲುವಿಗೆ ಅಂತಿಮ ದಿನ ಇನ್ನೂ 291 ರನ್ ಅಗತ್ಯವಿದೆ. ಭಾರತೀಯ ಬೌಲರ್‌ಗಳ ಕೈ ಮೇಲಾದರೆ ಜಯದ ಕನಸು ಕಾಣಬಹುದು.

ಹಾಗಾಗಿ, ಪಂದ್ಯದ ಕೊನೆಯ ಹಾಗೂ ಐದನೇ ದಿನವಾದ ಸೋಮವಾರದ ಆಟ ಕುತೂಹಲ ಕೆರಳಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 1–1ರ ಸಮಬಲ ಸಾಧಿಸಿವೆ. ಸರಣಿ ಜಯದ ಅವಕಾಶವನ್ನು ಜೀವಂತವಾಗಿಟ್ಟುಕೊಳ್ಳಲು ಉಭಯ ತಂಡಗಳಿಗೂ ಈ ಪಂದ್ಯದ ಜಯ ಮುಖ್ಯವಾಗಿದೆ.

ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿಯೂ ಅರ್ಧಶತಕ ಗಳಿಸಿದ ಶ್ರೇಯಕ್ಕೆ ಪಾತ್ರರಾದ ಶಾರ್ದೂಲ್ ಮತ್ತು ಪಂತ್ ಏಳನೇ ವಿಕೆಟ್ ಜೊತೆಯಾಟದಲ್ಲಿ 100 ರನ್ ಸೇರಿಸಿದರು. ಇದರಿಂದಾಗಿ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಭಾರತ 148.2 ಓವರ್‌ಗಳಲ್ಲಿ 466 ರನ್‌ ಗಳಿಸಿತು.

ಇನಿಂಗ್ಸ್‌ನ ಕೊನೆಯಲ್ಲಿ ಉಮೇಶ್ ಯಾದವ್ (25) ಮತ್ತು ಜಸ್‌ಪ್ರೀತ್ ಬೂಮ್ರಾ (24ರನ್) 9ನೇ ವಿಕೆಟ್‌ಗೆ 36 ರನ್‌ ಸೇರಿಸಿ, ತಂಡದ ಮೊತ್ತ ಹಿಗ್ಗಿಸಲು ಕಾಣಿಕೆ ನೀಡಿದರು.

ಜೋ ರೂಟ್ ಬಳಗವು ಶನಿವಾರ ಮೊದಲ ಇನಿಂಗ್ಸ್‌ನಲ್ಲಿ 99 ರನ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ರೋಹಿತ್ ಶರ್ಮಾ ಅಮೋಘ ಶತಕ ಮತ್ತು ಚೇತೇಶ್ವರ್ ಪೂಜಾರ ಅವರ ಅರ್ಧಶತಕದ ಬಲದಿಂದ ದಿನದಾಟದ ಕೊನೆಯಲ್ಲಿ ಭಾರತವು 138 ರನ್‌ಗಳ ಮುನ್ನಡೆ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ 4ನೇ ದಿನದಾಟದ ಆರಂಭದಲ್ಲಿ ಬೌಲರ್‌ಗಳ ಸವಾಲಿಗೆ ತಾಳ್ಮೆಯಿಂದ ಉತ್ತರಿಸಿದರು. ಈ ಜೋಡಿಯು ನಾಲ್ಕನೇ ವಿಕೆಟ್‌ಗೆ 59 ರನ್‌ ಸೇರಿಸಿತು. ವೇಗಿ ಕ್ರಿಸ್ ವೋಕ್ಸ್‌ ಎಸೆತದಲ್ಲಿ ರವೀಂದ್ರ ಜಡೇಜ ಔಟಾಗುವುದರೊಂದಿಗೆ ಜೊತೆಯಾಟ ಮುರಿದುಬಿತ್ತು. ತಮ್ಮ ಇನ್ನೊಂದು ಓವರ್‌ನಲ್ಲಿ ವೋಕ್ಸ್‌ ಬೀಸಿದ ಎಲ್‌ಬಿ ಬಲೆಗೆ ಅಜಿಂಕ್ಯ ರಹಾನೆ ಬಿದ್ದರು. ಖಾತೆ ತೆರೆಯದೇ ಮರಳಿದರು.

ಸ್ವಲ್ಪ ಹೊತ್ತಿನ ನಂತರ ವಿರಾಟ್ (44 ರನ್) ಸ್ಪಿನ್ನರ್ ಮೊಯಿನ್ ಅಲಿ ಎಸೆತದಲ್ಲಿ ಔಟಾದರು. ಇದರಿಂದಾಗಿ ಊಟದ ವಿರಾಮಕ್ಕೆ ತಂಡವು 118 ಓವರ್‌ಗಳಲ್ಲಿ 329 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು.

ರೋಹಿತ್–ಪೂಜಾರಗೆ ಗಾಯ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ ಅವರು ಗಾಯಗೊಂಡಿದ್ದು ಭಾನುವಾರ ಫೀಲ್ಡಿಂಗ್ ಮಾಡಲಿಲ್ಲ.

ಬ್ಯಾಟಿಂಗ್ ಮಾಡುವ ವೇಳೆ ರೋಹಿತ್ ಮೊಣಕಾಲಿಗೆ ಗಾಯ ವಾಗಿತ್ತು. ಪೂಜಾರ ಹಿಮ್ಮಡಿ ಉಳು ಕಿತ್ತು. ಇದರಿಂದಾಗಿ ಅವರು ವಿಶ್ರಾಂತಿ ಪಡೆದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಬದಲೀ ಆಟಗಾರರು ಅವರಿ ಬ್ಬರ ಬದಲಿಗೆ ಫೀಲ್ಡಿಂಗ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT