ರಾಂಚಿ: ಇಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ ದಕ್ಷಿಣ ಆಫ್ರಿಕಾ ತಂಡವು 279 ರನ್ಗಳ ಗುರಿ ಒಡ್ಡಿದೆ.
ಏಡನ್ ಮಾರ್ಕರಮ್ (79) ಮತ್ತು ರೀಜಾ ಹೆನ್ರಿಕ್ಸ್ (74) ಆಕರ್ಷಕ ಅರ್ಧಶತಗಳ ಬೆಂಬಲದಿಂದ ದಕ್ಷಿಣ ಆಫ್ರಿಕಾ ತಂಡವು ಏಳು ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತು.
ತೆಂಬ ಬಾವುಮಾ ಅನುಪಸ್ಥಿತಿಯಲ್ಲಿ ಪ್ರವಾಸಿ ತಂಡವನ್ನು ಕೇಶವ್ ಮಹಾರಾಜ್ ಮುನ್ನಡೆಸುತ್ತಿದ್ದಾರೆ.
ಆರಂಭಿಕರಾದ ಕ್ವಿಂಟನ್ ಡಿ ಕಾಕ್ (5) ಹಾಗೂ ಜೆನ್ಮನ್ ಮಲಾನ್ (25) ವಿಕೆಟ್ಗಳು ತಂಡವು 40 ರನ್ ಗಳಿಸುವಷ್ಟರಲ್ಲಿ ನಷ್ಟವಾಗಿತ್ತು.
ಈ ಹಂತದಲ್ಲಿ ಜೊತೆ ಸೇರಿದ ಮಾರ್ಕರಮ್ ಹಾಗೂ ಹೆನ್ರಿಕ್ಸ್ ಮೂರನೇ ವಿಕೆಟ್ಗೆ 129 ರನ್ಗಳ ಜೊತೆಯಾಟ ಕಟ್ಟಿದರು.
76 ಎಸೆತಗಳನ್ನು ಎದುರಿಸಿದ ರೀಜಾ ಒಂಬತು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 74 ರನ್ ಗಳಿಸಿದರು. ಇನ್ನೊಂದೆಡೆ ಮಾರ್ಕರಮ್, 89 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 79 ರನ್ ಪೇರಿಸಿದರು.
ಹೆನ್ರಿಚ್ ಕ್ಲಾಸೆನ್ (30) ಹಾಗೂ ಡೇವಿಡ್ ಮಿಲ್ಲರ್ (ಅಜೇಯ 35) ಸಹ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇನ್ನುಳಿದಂತೆ ವೇಯ್ನ್ ಪಾರ್ನೆಲ್ 16 ರನ್ ಗಳಿಸಿದರು.
ಭಾರತದ ಪರ ಪ್ರಭಾವಿ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 38 ರನ್ ತೆತ್ತು ಮೂರು ವಿಕೆಟ್ ಕಬಳಿಸಿದರು.
ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡವು ಸರಣಿ ಜೀವಂತವಾಗಿರಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಏಕದಿನ ಸರಣಿಯ ಅಂತಿಮ ಪಂದ್ಯವು ಅಕ್ಟೋಬರ್ 11 ಮಂಗಳವಾರದಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.