ದುಬೈ: ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಪ್ರತಿಭೆಯಿದೆ. ಆದರೆ ವಿಶ್ವಕಪ್ ಗೆಲ್ಲಲು ಪ್ರಬುದ್ದತೆಯನ್ನು ತೋರಿಸಬೇಕಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಲಹೆ ಮಾಡಿದ್ದಾರೆ.
ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾವು ಏನು ಮಾಡಬೇಕು ಎಂದು ಕೇಳಿದಾಗ, 'ಟೂರ್ನಿಗೆ ಕಾಲಿಡುವುದರೊಂದಿಗೆ ಸುಲಭವಾಗಿ ನೀವು ಚಾಂಪಿಯನ್ ಆಗುವುದಿಲ್ಲ. ಆದ್ದರಿಂದ ಪ್ರಕ್ರಿಯೆಯ ಮೂಲಕ ಹಾದು ಹೋಗಬೇಕಿದೆ. ಪ್ರಬುದ್ಧತೆಯನ್ನು ತೋರಿಸಬೇಕು' ಎಂದು ದಾದಾ ತಿಳಿಸಿದರು.
'ತಂಡದಲ್ಲಿ ಪ್ರತಿಭೆಯಿದೆ. ಈ ಮಟ್ಟದಲ್ಲಿ ರನ್ ಗಳಿಸಲು ಹಾಗೂ ವಿಕೆಟ್ ಪಡೆಯುವ ಕೌಶಲ್ಯವನ್ನು ಹೊಂದಿದ್ದೇವೆ. ವಿಶ್ವಕಪ್ ಗೆಲ್ಲಲು ಉತ್ತಮ ಮನಸ್ಥಿತಿಯಲ್ಲಿರಬೇಕು' ಎಂದು ಹೇಳಿದರು.
'ಫೈನಲ್ ಮುಗಿದ ನಂತರವಷ್ಟೇ ಪ್ರಶಸ್ತಿ ಒಲಿಯುತ್ತದೆ. ಹಾಗಾಗಿ ಅದಕ್ಕಿಂತ ಮೊದಲು ಸಾಕಷ್ಟು ಕ್ರಿಕೆಟ್ ಆಡಬೇಕಿದೆ. ಆದ್ದರಿಂದ ಆರಂಭದಿಂದಲೇ ಪ್ರಶಸ್ತಿ ಬಗ್ಗೆ ಯೋಚಿಸುವ ಬದಲು ಟೀಮ್ ಇಂಡಿಯಾವು ಪ್ರತಿ ಪಂದ್ಯದತ್ತ ಗಮನ ಕೇಂದ್ರಿಕರಿಸಬೇಕುಎಂದು ನಾನು ಭಾವಿಸುತ್ತೇನೆ' ಎಂದರು.
'ಯಾವುದೇ ಟೂರ್ನಿ ಆಡಿದರೂ ಭಾರತವು ಕಠಿಣ ಸ್ಪರ್ಧೆ ಒಡ್ಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸಂಯಮದಿಂದ ಇರಬೇಕು. ಫಲಿತಾಂಶಕ್ಕಿಂತ ಹೆಚ್ಚಾಗಿ ಪ್ರಕ್ರಿಯೆಯತ್ತ ಗಮನ ಕೇಂದ್ರಿಕರಿಸಬೇಕು. ಯಾಕೆಂದರೆ ಕ್ರೀಸಿಗಿಳಿದು ಗಾರ್ಡ್ ಪಡೆದ ತಕ್ಷಣ ವಿಶ್ವಕಪ್ ಗೆಲ್ಲಲು ನಾವಿಲ್ಲಿದ್ದೇವೆ ಎಂದು ಭಾವಿಸುವುದು ತಪ್ಪಾದ ಕೆಲಸವಾಗಿದೆ. ಇದರ ಬದಲು ಒಂದೊಂದು ಬಾಲ್ನತ್ತ ಗಮನ ಕೇಂದ್ರಿಕರಿಸಿ ಫೈನಲ್ ವರೆಗೂ ಈ ಪ್ರಕ್ರಿಯೆ ಮುಂದುವರಿಸಬೇಕಿದೆ' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.