ನವದೆಹಲಿ: ಪ್ರತಿಕೂಲ ಹವಾಮಾನದ ಕಾರಣ ಸೂಕ್ತ ಪೂರ್ವಸಿದ್ಧತೆಯಿಲ್ಲದಿದ್ದರೂ ಭಾರತ 19 ವರ್ಷದೊಳಗಿನವರ ಕ್ರಿಕೆಟ್ ತಂಡವುಏಷ್ಯಾಕಪ್ ಜಯಿಸಿರುವುದು ಅತ್ಯಂತ ಶ್ಲಾಘನೀಯ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
ದುಬೈನಲ್ಲಿ ಶುಕ್ರವಾರ ನಡೆದ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಯುವ ತಂಡವು ಶ್ರೀಲಂಕಾವನ್ನು ಒಂಬತ್ತುವಿಕೆಟ್ಗಳಿಂದ ಮಣಿಸಿ ದಾಖಲೆಯ ಎಂಟನೇ ಬಾರಿ ಪ್ರಶಸ್ತಿಗೆ ಮುತ್ತಿಟ್ಟಿತ್ತು.
‘ಭಾರತ ತಂಡದ ಈ ಸಾಧನೆಯು ಮುಂಬರುವ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಗೆ ಸಿದ್ಧವಾಗಲಿರುವ ತಂಡದ ವಿಶ್ವಾಸವನ್ನು ಇನ್ನಷ್ಟು ವೃದ್ಧಿಸಿದೆ‘ ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ನಲ್ಲಿ ಜನವರಿ 14ರಿಂದ ಫೆಬ್ರುವರಿ 5ರವರೆಗೆ ವಿಶ್ವಕಪ್ ಟೂರ್ನಿ ನಿಗದಿಯಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಕೂಡ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.