ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
ಇದರೊಂದಿಗೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ (53) ಹಾಗೂ ದೇವದತ್ತ ಪಡಿಕ್ಕಲ್ (70) ಪಡಿಕ್ಕಲ್ ಹೋರಾಟವು ವ್ಯರ್ಥವೆನಿಸಿದೆ.
ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಆರ್ಸಿಬಿ ತಂಡವು ಆರು ವಿಕೆಟ್ ನಷ್ಟ್ಕಕೆ 156 ರನ್ಗಳ ಸ್ಪರ್ಧಾತ್ಮಕ ಗುರಿ ಪೇರಿಸಿತ್ತು. ಗುರಿ ಬೆನ್ನತ್ತಿದ ಚೆನ್ನೈ ಇನ್ನು 11 ಎಸೆತಗಳು ಬಾಕಿ ಉಳಿದಿರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.
ಮೊಯಿನ್ ಅಲಿ 23 ರನ್ ಗಳಿಸಿ ಔಟಾದರು. ಅಂತಿಮ 5 ಓವರ್ಗಳಲ್ಲಿ ಚೆನ್ನೈ ಗೆಲುವಿಗೆ 32 ರನ್ಗಳ ಅಗತ್ಯವಿತ್ತು.
ಯಜುವೇಂದ್ರ ಚಾಹಲ್ ದಾಳಿಯಲ್ಲಿ ವಿರಾಟ್ ಕೊಹ್ಲಿ ಅಧ್ಭುತ ಕ್ಯಾಚ್ ಹಿಡಿದರು. ಪರಿಣಾಮ ಋತುರಾಜ್ ಗಾಯಕವಾಡ್ (38) ಪೆವಿಲಿಯನ್ಗೆ ಮರಳಬೇಕಾಯಿತು. ಆದರೂ ಮೊದಲ ವಿಕೆಟ್ಗೆ ಫಾಫ್ ಡು ಪ್ಲೆಸಿ ಜೊತೆಗೆ 8.2 ಓವರ್ಗಳಲ್ಲಿ 71 ರನ್ಗಳ ಜೊತೆಯಾಟ ನೀಡಿದರು.
ಗಾಯಕವಾಡ್ ಬೆನ್ನಲ್ಲೇ ಫಾಫ್ ಡು ಪ್ಲೆಸಿ (31) ವಿಕೆಟ್ ಪತನವಾಯಿತು. ಈ ವೇಳೆ ಚೆನ್ನೈ 71 ರನ್ ಗಳಿಸಿತ್ತು.
157 ರನ್ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಋತುರಾಜ್ ಗಾಯಕವಾಡ್ ಹಾಗೂ ಫಾಫ್ ಡು ಪ್ಲೆಸಿ ಬಿರುಸಿನ ಆರಂಭವೊದಗಿಸಿದರು. ಪರಿಣಾಮ ಪವರ್ ಪ್ಲೇಯಲ್ಲಿ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿತ್ತು.