ನವದೆಹಲಿ: ಪೃಥ್ವಿ ಶಾ ಅಬ್ಬರದ ಶತಕದ ಬಲದಿಂದ ಜಯಭೇರಿ ಬಾರಿಸಿದ ಮುಂಬೈ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು. ಗುರುವಾರ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಮರ್ಥ್ ನಾಯಕತ್ವದ ಕರ್ನಾಟಕವನ್ನು ಪೃಥ್ವಿ ಬಳಗವು ಎದುರಿಸಲಿದೆ.
ಮಂಗಳವಾರ ಪಾಲಂ ಏರ್ಫೋರ್ಸ್ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ಫೈನಲ್ನಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡವು 50 ಓವರ್ಗಳಲ್ಲಿ 5 ವಿಕೆಟ್ಗಳಿಗೆ 284 ರನ್ ಗಳಿಸಿತು. ಅದಕ್ಕುತ್ತರವಾಗಿ ಮುಂಬೈ ತಂಡವು 41.5 ಓವರ್ಗಳಲ್ಲಿ 1 ವಿಕೆಟ್ಗೆ 285 ರನ್ ಗಳಿಸಿತು. 9 ವಿಕೆಟ್ಗಳ ಜಯ ದಾಖಲಿಸಿತು.
ಮುಂಬೈ ತಂಡದ ನಾಯಕ ಪೃಥ್ವಿ ಶಾ (ಔಟಾಗದೆ 185; 123ಎಸೆತ, 21ಬೌಂಡರಿ, 7ಸಿಕ್ಸರ್) ಅವರು ಟೂರ್ನಿಯಲ್ಲಿ ಮೂರನೇ ಶತಕ ಹೊಡೆದರು. ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ ಯಶಸ್ವಿ ಜೈಸ್ವಾಲ್ (75; 104ಎಸೆತ, 10ಬೌಂಡರಿ, 1ಸಿಕ್ಸರ್) ಅವರೊಂದಿಗೆ 238 ರನ್ ಸೇರಿಸಿದರು.
ಸೋಮವಾರ ನಡೆದಿದ್ದ ಕ್ವಾರ್ಟರ್ಫೈನಲ್ನಲ್ಲಿ ಕರ್ನಾಟಕ ತಂಡವು ಕೇರಳದ ವಿರುದ್ಧ ಜಯಿಸಿತ್ತು. ಪಂದ್ಯದಲ್ಲಿ ಆರಂಭಿಕ ಜೋಡಿ ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ ಶತಕಗಳನ್ನು ಗಳಿಸಿದ್ದರು.
ಉತ್ತರಪ್ರದೇಶಕ್ಕೆ ಜಯ: ಮಧ್ಯಮಕ್ರಮಾಂಕದ ಬ್ಯಾಟ್ಸ್ಮನ್ ಉಪೇಂದ್ರ ಯಾದವ್ (112; 101ಎ, 11ಬೌಂ, 2ಸಿ) ಅವರ ಅಮೋಘ ಶತಕದ ಬಲದಿಂದ ಉತ್ತರಪ್ರದೇಶ ತಂಡವು ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ 48 ರನ್ಗಳಿಂದ ದೆಹಲಿ ತಂಡವನ್ನು ಮಣಿಸಿತು. ಸೆಮಿಫೈನಲ್ನಲ್ಲಿ ಉತ್ತರ ಪ್ರದೇಶ ತಂಡವು ಗುಜರಾತ್ ಎದುರು ಕಣಕ್ಕಿಳಿಯಲಿದೆ.