ಮೈಸೂರು: ಕರ್ನಾಟಕ ಹಾಗೂ ಗೋವಾ ತಂಡಗಳ ನಡುವೆ ಇದೇ 19ರಿಂದ ರಣಜಿ ಟ್ರೋಫಿ ಪಂದ್ಯಕ್ಕೆ ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ಸಜ್ಜಾಗಿದ್ದು, ಪ್ರವಾಸಿ ತಂಡ ಬುಧವಾರ ನೆಟ್ಸ್ನಲ್ಲಿ ಅಭ್ಯಾಸ ನಡೆಸಿತು.
ಮಧ್ಯಾಹ್ನ 3.30ರ ಸುಮಾರಿಗೆ ನಾಯಕ ದರ್ಶನ್ ಮಿಸಾಳ್ ನೇತೃತ್ವದಲ್ಲಿ ಕ್ರೀಡಾಂಗಣಕ್ಕೆ ಬಂದ ಗೋವಾ ಆಟಗಾರರು ಸಂಜೆವರೆಗೆ ನೆಟ್ಸ್ನಲ್ಲಿ ಅಭ್ಯಾಸ ನಡೆಸಿದರು. ಆರಂಭದಲ್ಲಿ ವ್ಯಾಯಾಮಗಳ ಮೂಲಕ ಮೈ ಹುರಿಗೊಳಿಸಿಕೊಂಡ ಆಟಗಾರರು ನಂತರ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರು. ಬಲಗೈ ಬ್ಯಾಟರ್ ಸ್ನೇಹಲ್ ಕೌತಣಕರ, ಎಡಗೈ ಬ್ಯಾಟ್ಸ್ಮನ್ ಮಂಥನ್ ಕುತ್ಕರ್ ಹೆಚ್ಚು ಹೊತ್ತು ಬ್ಯಾಟಿಂಗ್ ಅಭ್ಯಸಿಸಿದರು.
ಗೋವಾ ತಂಡದಲ್ಲಿ ರಾಹುಲ್ ತ್ರಿಪಾಠಿ ಹಾಗೂ ಅರ್ಜುನ್ ತೆಂಡುಲ್ಕರ್ ಆಕರ್ಷಣೆಯಾಗಿದ್ದು, ಅವರು ನೆಟ್ಸ್ನಲ್ಲಿ ಕಾಣಿಸಿಕೊಳ್ಳಲಿಲ್ಲ.
ಆರ್ಸಿಬಿ ಆಟಗಾರ, ಆಲ್ರೌಂಡರ್ ಸುಯಶ್ ಪ್ರಭುದೇಸಾಯಿ ಗೋವಾ ತಂಡದಲ್ಲಿದ್ದಾರೆ. ಜೊತೆಗೆ ಕರ್ನಾಟಕ ಮೂಲದ ಕೃಷ್ಣಮೂರ್ತಿ ಸಿದ್ದಾರ್ಥ್ ಸದ್ಯ ಪ್ರವಾಸಿ ತಂಡದಲ್ಲಿ ಸ್ಥಾನ ಪಡೆದಿದ್ದು, ವಿಕೆಟ್ ಕೀಪಿಂಗ್ ಜೊತೆಗೆ ಬಲಗೈ ಬ್ಯಾಟರ್ ಆಗಿದ್ದಾರೆ. ಕರ್ನಾಟಕ ಆಟಗಾರರು ಸಂಜೆ ಮೈಸೂರಿಗೆ ಬಂದಿಳಿದಿದ್ದು, ಪಂದ್ಯದ ಮುನ್ನಾ ದಿನವಾದ ಗುರುವಾರ ಬೆಳಿಗ್ಗೆಯಿಂದಲೇ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಮೈದಾನದಲ್ಲಿ ಐದು ಪಿಚ್ಗಳಿದ್ದು, ಪಂದ್ಯಕ್ಕೆಂದು ಮಧ್ಯದ ಅಂಕಣವನ್ನು ಸಜ್ಜುಗೊಳಿಸುವ ಕಾರ್ಯ ನಡೆದಿದೆ.