ತಿರುವನಂತಪುರ:ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ತಮ್ಮ ತಂಡದ ಕಳಪೆ ಫೀಲ್ಡಿಂಗ್ಗೆಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ. ‘ಫೀಲ್ಡಿಂಗ್ನಲ್ಲಿ ಚುರುಕಾಗಿರಬೇಕು. ಇಲ್ಲದೇ ಹೋದರೆ ನಾವು ಎಷ್ಟು ರನ್ ಹೊಡೆದರೂ ಅದನ್ನು ಡಿಫೆಂಡ್ ಮಾಡಲು ಆಗುವುದಿಲ್ಲ’ ಎಂದಿದ್ದಾರೆ.
ಭುವನೇಶ್ವರ ಕುಮಾರ್ ಅವರ ಸತತ ಎಸೆತಗಳಲ್ಲಿ ಫೀಲ್ಡರ್ಗಳು ಕ್ಯಾಚ್ಗಳನ್ನು ಬಿಟ್ಟಿದ್ದು ತುಟ್ಟಿಯಾಗಿ ಪರಿಣಮಿಸಿತ್ತು. ಮಿಡ್ಆಫ್ನಲ್ಲಿ ವಾಷಿಂಗ್ಟನ್ ಸುಂದರ್ ಸುಲಭ ಕ್ಯಾಚ್ ನೆಲಕ್ಕೆ ಹಾಕಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ ಚೆಂಡನ್ನು ಹಿಡಿದರೂ, ನಿಯಂತ್ರಣಕ್ಕೆ ಪಡೆಯಲು ವಿಫಲರಾಗಿದ್ದರು.
ಈ ಔದಾರ್ಯದ ಲಾಭ ಪಡೆದ ಲೆಂಡ್ಲ್ ಸಿಮನ್ಸ್ (45 ಎಸೆತಗಳಲ್ಲಿ ಅಜೇಯ 67) ತಂಡವನ್ನು ಗೆಲುವಿನ ದಡ ತಲುಪಿಸಲು ನೆರವಾದರು. ಎವಿನ್ ಲೂಯಿಸ್ ಮೊದಲ ವಿಕೆಟ್ ಜೊತೆಯಾಟದಲ್ಲಿ 73 ರನ್ ಬರಲು ನೆರವಾಗಿದ್ದರು.
‘ಇಷ್ಟೊಂದು ಕೆಟ್ಟದಾಗಿ ಫೀಲ್ಡ್ ಮಾಡಿದರೆ, ಎಷ್ಟು ರನ್ ಹೊಡೆದರೂ ಸಾಲುವುದಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ನಮ್ಮ ಫೀಲ್ಡಿಂಗ್ ಕಳಪೆಯಾಗಿದೆ. ಎರಡನೇ ಪಂದ್ಯದಲ್ಲಿ ಒಂದೇ ಓವರ್ನಲ್ಲಿ (ಭುವನೇಶ್ವರ್) ಎರಡು ವಿಕೆಟ್ ಬಿದ್ದಿದ್ದರೆ ವೆಸ್ಟ್ ಇಂಡೀಸ್ ಎಷ್ಟು ಒತ್ತಡಕ್ಕೆ ಸಿಲುಕುತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ’ ಎಂದು ಕೊಹ್ಲಿ ಪಂದ್ಯದ ನಂತರ ಪುರಸ್ಕಾರ ಪ್ರದಾನ ವೇಳೆ ಹೇಳಿದ್ದಾರೆ.