ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಕೆಪಿಎಲ್ ಪಂದ್ಯವೊಂದರಲ್ಲಿ ಕಾರ್ಯನಿರ್ವಹಿಸಿದ್ದ ಅಂಪೈರ್ ಬಿ.ಕೆ.ರವಿ ಅವರನ್ನು ಗುರುವಾರ ವಿಚಾರಣೆ ನಡೆಸಿದ್ದಾರೆ.
ಕೆಪಿಎಲ್ನ ಕೆಲವು ಪಂದ್ಯಗಳಿಗೆ ಬಿ.ಕೆ.ರವಿ ಅಂಪೈರ್ ಆಗಿದ್ದರು. ಅವರ ಮಗ ಬಿ.ಆರ್. ಶರತ್ ಕೆಪಿಎಲ್ನಲ್ಲಿ ತಂಡವೊಂದನ್ನು ಪ್ರತಿನಿಧಿಸುತ್ತಿದ್ದಾರೆ. ಮಗ ಆಡಿದ್ದ ಪಂದ್ಯವೊಂದಕ್ಕೆ ರವಿ ಮೂರನೇ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ನಿಯಮದ ಪ್ರಕಾರ ತಮ್ಮ ಕುಟುಂಬದ ಸದಸ್ಯರು ಯಾರಾದರೂ ತಂಡದಲ್ಲಿ ಆಡುತ್ತಿದ್ದರೆ, ಆ ಪಂದ್ಯದಲ್ಲಿ ಪೋಷಕರು ತೀರ್ಪುಗಾರರಾಗುವಂತಿಲ್ಲ.
ಆದರೆ, ತಮ್ಮ ಪುತ್ರ ಶರತ್ ಬಿ. ಆರ್ ಆಡುತ್ತಿದ್ದ ಪಂದ್ಯವೊಂದಕ್ಕೆ ಬಿ.ಕೆ. ರವಿ ಅವರು ಮೂರನೇ ತೀರ್ಪುಗಾರರಾಗಿದ್ದರು. ಆ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ಬಿ.ಕೆ. ರವಿ ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೆಪಿಎಲ್ ತಂಡಗಳ ಮಾಲೀಕರಿಗೆ ತಮ್ಮ ತಂಡಗಳ ಆರ್ಥಿಕ ವಹಿವಾಟು ಮತ್ತು ಲೆಕ್ಕಪತ್ರಗಳನ್ನು ಒದಗಿಸುವಂತೆ ಸಿಸಿಬಿ ಪೊಲೀಸರು ನ. 20ರಂದು ನೀಡಿದ್ದ ನೋಟಿಸ್ಗೆ ಈವರೆಗೆ ಎರಡು ತಂಡಗಳಿಂದ ಮಾತ್ರ ಪ್ರತಿಕ್ರಿಯೆ ಬಂದಿದೆ.
ಕೇವಲ ಎರಡು ತಂಡದವರು ಮಾತ್ರ ತಮ್ಮ ತಂಡದ ಮ್ಯಾನೇಜರ್ಗಳ ಜತೆಗೆ ಕೆಲವೊಂದು ದಾಖಲೆಗಳ ಸಮೇತ ಸಿಸಿಬಿ ಅಧಿಕಾರಿಗಳ ಎದುರು ಬುಧವಾರ ಹಾಜರಾಗಿದ್ದರು. ಇನ್ನೆರಡು ತಂಡಗಳು ಅಪೂರ್ಣವಾದ ದಾಖಲೆ ತಂದಿದ್ದರು. ಪೂರ್ಣ ದಾಖಲೆ ತರುವಂತೆ ಸೂಚಿಸಿ ಸಿಸಿಬಿ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.