ಕೊಲಂಬೊ: ಟೀಮ್ ಇಂಡಿಯಾದ ಪೂರ್ಣಾವಧಿ ಕೋಚ್ ಆಗುವ ಬಗ್ಗೆ ಈವರೆಗೆ ಯೋಚನೆ ಮಾಡಿಲ್ಲ ಎಂದು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಟೂರ್ನಿಯಲ್ಲಿ ಭಾರತ ತಂಡದ ಕೋಚ್ ಆಗಿ ಅವರು ಕಾರ್ಯನಿರ್ವಹಿಸಿದ್ದಾರೆ.
ಶ್ರೀಲಂಕಾದಲ್ಲಿ ಟೀಮ್ ಇಂಡಿಯಾಕ್ಕೆ ಕೋಚಿಂಗ್ ನೀಡುವುದನ್ನು ಎಂಜಾಯ್ ಮಾಡಿದ್ದೇನೆ. ಈ ಅನುಭವ ನನಗೆ ಸಂತೋಷ ಕೊಟ್ಟಿದೆ. ಇದಕ್ಕಿಂತ ಹೆಚ್ಚಿನದನ್ನು ಏನೂ ಯೋಚಿಸಿಲ್ಲ ಎಂದು ಗುರುವಾರದ ಟಿ–20 ಪಂದ್ಯದ ಬಳಿಕ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ತಂಡದ ಕೋಚ್ ಆಗಿ ಪೂರ್ಣಾವಧಿಗೆ ಮುಂದುವರಿಯಲು ಬಯಸುತ್ತೀರಾ ಎಂಬ ಬಗ್ಗೆ ದ್ರಾವಿಡ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕುತ್ತರಿಸಿದ ಅವರು, ನಾನೀಗ ಏನು ಮಾಡುತ್ತಿದ್ದೇನೆಯೋ ಆ ಬಗ್ಗೆ ನನಗೆ ತೃಪ್ತಿ ಇದೆ. ಈ ಪ್ರವಾಸದ ಹೊರತಾಗಿ ಬೇರೇನನ್ನೂ ಯೋಚಿಸಿಲ್ಲ ಎಂದು ಹೇಳಿದ್ದಾರೆ.
ಲಂಕಾ ವಿರುದ್ಧ ಗುರುವಾರ ರಾತ್ರಿ ನಡೆದ ಅಂತಿಮ ಟಿ–20 ಪಂದ್ಯದಲ್ಲಿ ಏಳು ವಿಕೆಟ್ಗಳಿಂದ ಸೋಲುವ ಮೂಲಕ ಭಾರತ 2-1 ಅಂತರದಲ್ಲಿ ಸರಣಿ ಸೋಲನುಭವಿಸಿತ್ತು.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ನಿರ್ದೇಶಕರೂ ಆಗಿರುವ ರಾಹುಲ್ ದ್ರಾವಿಡ್ 19 ವರ್ಷದೊಳಗಿನವರ ಮತ್ತು ಭಾರತ 'ಎ' ತಂಡಕ್ಕೆ ಕೋಚಿಂಗ್ ನೀಡಿ ಯಶಸ್ವಿಯಾಗಿದ್ದಾರೆ. ಆದರೆ ಹಿರಿಯರ ತಂಡಕ್ಕೆ ಕೋಚಿಂಗ್ ನೀಡಿದ್ದು ಶ್ರೀಲಂಕಾ ಪ್ರವಾಸದಲ್ಲಿ ಮೊದಲು.