ಬೆಳಗಾವಿ: ಇಲ್ಲಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ವಿರುದ್ಧ ಟಾಸ್ ಗೆದ್ದ ಕರ್ನಾಟಕ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಪಂದ್ಯಕ್ಕೆ ವಿನಯ್ ಕುಮಾರ್ ಅಲಭ್ಯರಾಗಿದ್ದು, ಶ್ರೇಯಸ್ ಗೋಪಾಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ರಾಜ್ಯ ತಂಡ 9 ಓವರ್ಗಳ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು, 21 ರನ್ ಗಳಿಸಿದೆ. ಶಿಶಿರ ಭವಾನೆ 5 ರನ್ ಗಳಿಸಿ ಔಟಾಗಿದ್ದಾರೆ.
ಬೆಳಗಾವಿಯಲ್ಲಿ ಈವರೆಗೆ ಒಟ್ಟು ನಾಲ್ಕು ರಣಜಿ ಪಂದ್ಯಗಳು ನಡೆದಿವೆ. ಇದರಲ್ಲಿ ಕರ್ನಾಟಕ ತಂಡ 1970–71 ಮತ್ತು 2000–01ರಲ್ಲಿ ಆಂಧ್ರ ಎದುರು ಜಿಮ್ಖಾನಾ ಮೈದಾನದಲ್ಲಿ ಪಂದ್ಯಗಳನ್ನು ಆಡಿದೆ. ಮುಂಬೈ ಮೊದಲ ಬಾರಿಗೆ ಇಲ್ಲಿ ಆಡುತ್ತಿದೆ.
ರಾಜ್ಯ ತಂಡ 2013–14 ಮತ್ತು 2014–15ರಲ್ಲಿ ರಣಜಿ ಚಾಂಪಿಯನ್ ಆಗಿತ್ತು. ಆದರೆ, ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಒಂದು ಸಲ ಲೀಗ್ ಹಂತ ಮತ್ತು ಎರಡು ಸಲ ನಾಕೌಟ್ ತಲುಪಿತ್ತು.