ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಲ್ಲಿಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿಲ್ಲ. ಖ್ಯಾತನಾಮ ಆಟಗಾರರಿದ್ದರೂ ಟ್ರೋಫಿಗೆ ಮುತ್ತಿಕ್ಕಲು ತಂಡಕ್ಕೆ ಸಾಧ್ಯವಾಗಿಲ್ಲ.
ಆದರೆ ಈ ಬಾರಿ ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಜಯಿಸಲು ಆರ್ಸಿಬಿಗೆ ಅವಕಾಶ ಇದೆ ಎಂದು ಕ್ರಿಕೆಟ್ ವೀಕ್ಷಕ ವಿವರಣೆಕಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
’ಆರ್ಸಿಬಿಗೆ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಆಯ್ಕೆಗಳು ಇಲ್ಲ. ಅಲ್ಲಿ ಇರುವ ಕ್ರೀಡಾಂಗಣಗಳು ದೊಡ್ಡವು. ಆದ್ದರಿಂದ ಸ್ಪಿನ್ನರ್ಗಳಿಗೆ ಹೆಚ್ಚು ಅನುಕೂಲವಾಗಲಿದೆ. ಯಜುವೇಂದ್ರ ಚಾಹಲ್ ಅವರಂತಹ ಬೌಲರ್ ತಂಡದಲ್ಲಿದ್ದಾರೆ. ಇದರ ಲಾಭ ಆರ್ಸಿಬಿಗೆ ಸಿಗಲಿದೆ‘ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.
’ಹೋದ 12 ವರ್ಷಗಳಲ್ಲಿ ನಡೆದಿರುವುದನ್ನು ಮರೆತುಬಿಡಿ. ಈ ಸಲದ ಸನ್ನಿವೇಶ ಬೇರೆ ಇದೆ. ಯುಎಇಯಲ್ಲಿ ಆಡುವುದು ಎಲ್ಲ ತಂಡಗಳಿಗೂ ಹೊದ ಅನುಭವವಾಗಲಿದೆ. ತವರಿನ ಅಂಗಳದ ವಾತಾವರಣ ಅಲ್ಲಿರುವುದಿಲ್ಲ. ಆದ್ದರಿಂದ ಎಲ್ಲರಿಗೂ ಸಮಾನ ಅವಕಾಶ ಸಿಗಲಿದೆ. ಇದರಿಂದಾಗಿ ಎಲ್ಲರೂ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಶಕ್ತಿ ಮೀರಿ ಪ್ರಯತ್ನಿಸಬೇಕು‘ ಎಂದಿದ್ದಾರೆ.
’ಕಿಂಗ್ಸ್ ಇಲೆವನ್ ತಂಡಕ್ಕೂ ಯುಎಇಯಲ್ಲಿ ಉತ್ತಮ ಅವಕಾಶವಿದೆ. ತಂಡದಲ್ಲಿರುವ ಗ್ಲೆನ್ ಮ್ಯಾಕ್ಸ್ವೆಲ್ ಅಲ್ಲಿ ಉತ್ತಮವಾಗಿ ಆಡಿರುವ ದಾಖಲೆಗಳಿವೆ. ಆ ತಂಡದಲ್ಲಿಯೂ ಉತ್ತಮ ಸ್ಪಿನ್ನರ್ಗಳು ಇದ್ದಾರೆ‘ ಎಂದಿದ್ದಾರೆ.
’ಸ್ಪಿನ್ ಬೌಲಿಂಗ್ನಿಂದ ಹೆಚ್ಚು ಲಾಭವಾಗುವ ಆಯಾಮವೊಂದನ್ನೇ ನೋಡಿದರೆ ಡೆಲ್ಲಿ ಕ್ಯಾಪಿಟಲ್ಸ್ಗೆ ದೊಡ್ಡ ಲಾಭವಾಗುವ ನಿರೀಕ್ಷೆ ಇದೆ. ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ, ಸಂದೀಪ್ ಲಾಮಿಚಾನೆ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿರುವುದು ಇದಕ್ಕೆ ಕಾರಣ‘ ಎಂದು ಆಕಾಶ್ ಹೇಳಿದ್ದಾರೆ.