ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್ ನಾಯಕರಾಗಿ ಮರುನೇಮಕವಾಗಿದ್ದಾರೆ.
ಮುಂದಿನ ವರ್ಷ ನಡೆಯುವ ಐಪಿಎಲ್ ಆವೃತ್ತಿಯಲ್ಲಿ ತಂಡವು ಅವರ ನಾಯಕತ್ವದಲ್ಲಿ ಆಡಲಿದೆ ಎಂದು ಫ್ರ್ಯಾಂಚೈಸಿಯು ಗುರುವಾರ ಪ್ರಕಟಿಸಿದೆ.
ಬೆನ್ನುನೋವಿನಿಂದಾಗಿ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾರಣ ಶ್ರೇಯಸ್ ಅವರು 2023ರ ಐಪಿಎಲ್ ಆವೃತ್ತಿಯಲ್ಲಿ ಆಡಿರಲಿಲ್ಲ. ಇದರಿಂದಾಗಿ ಕೆಕೆಆರ್ ನಿತೀಶ್ ರಾಣಾ ಅವರಿಗೆ ನಾಯಕನ ಜವಾಬ್ದಾರಿ ನೀಡಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಕೆಕೆಆರ್ ಸಿಇಒ ವೆಂಕಿ ಮೈಸೂರು, ‘ಶ್ರೇಯಸ್ ಮತ್ತೆ ನಾಯಕತ್ವ ವಹಿಸಿಕೊಂಡಿರುವುದಕ್ಕೆ ನಮಗೆ ಸಂತೋಷವಾಗಿದೆ’ ಎಂದು ಹೇಳಿದ್ದಾರೆ.
‘ಕಳೆದ ಆವೃತ್ತಿಯಲ್ಲಿ ಗಾಯದ ಕಾರಣ ನನ್ನ ಗೈರುಹಾಜರಿ ಸೇರಿದಂತೆ ಹಲವಾರು ಸವಾಲುಗಳು ತಂಡ ಎದುರಿಸಿದೆ. ನಿತೀಶ್ ಅವರನ್ನು ಉಪನಾಯಕರಾಗಿ ನೇಮಕ ಮಾಡಿರುವುದು ಸಂತೋಷವಾಗಿದೆ‘ ಎಂದು ಶ್ರೇಯಸ್ ಹೇಳಿದ್ದಾರೆ.
ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ಮೂಲಕ ಕ್ರಿಕೆಟ್ಗೆ ಮರಳಿದ್ದರು. ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 86 ಎಸೆತಗಳಲ್ಲಿ ಶತಕ ಬಾರಿಸಿದ್ದರು. ವಿಶ್ವಕಪ್ ಟೂರ್ನಿಯಲ್ಲಿಯೂ ಮಿಂಚಿದ್ದರು.