ಮುಂಬೈ (ಪಿಟಿಐ): ಅಂಗಳದಲ್ಲಿ ಆಟಗಾರನು ಮಾಡುವ ಸಾಧನೆಯನ್ನು ಮಾತ್ರ ಕ್ರೀಡಾಕ್ಷೇತ್ರವು ಗುರುತಿಸುತ್ತದೆ. ಉಳಿದ ಯಾವುದೇ ಅಂಶಗಳು ಪರಿಗಣನೆಗೆ ಬರುವುದಿಲ್ಲ ಎಂದು ಮಾಜಿ ಕ್ರಿಕಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
’ಪ್ರತಿಬಾರಿಯೂ ನೀವು ಡ್ರೆಸ್ಸಿಂಗ್ ಕೋಣೆಯೊಳಗೆ ಹೋಗುವಾಗ ಎಲ್ಲಿಂದ ಬಂದಿದ್ದೀರಿ, ಹಿನ್ನಲೆ ಏನು ಮತ್ತು ದೇಶದ ಯಾವ ಭಾಗವನ್ನು ಪ್ರತಿನಿಧಿಸುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ. ಏಕೆಂದರೆ, ಎಲ್ಲರಿಗೂ ಸಮಾನವಾದ ಅವಕಾಶವನ್ನು ಆಟದಂಗಳ ನೀಡುತ್ತದೆ‘ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೇಳಿದರು.
ಅನ್ಅಕಾಡೆಮಿ ಆನ್ಲೈನ್ ಶಿಕ್ಷಣದ ಪ್ರಚಾರ ರಾಯಭಾರಿಯಾಗಿರುವ ಸಚಿನ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
’ತಂಡದ ಗೆಲುವಿಗಾಗಿ ಕಾಣಿಕೆ ಕೊಡುವ ಕರ್ತವ್ಯದೊಂದಿಗೆ ಕಣಕ್ಕಿಳಿಯುತ್ತೇವೆ. ಅದರ ಮೇಲೆಯೇ ಚಿತ್ತ ಇರಬೇಕು. ನಾನು ಬೇರೆ ಬೇರೆ ಕೋಚ್ಗಳು, ನಾಯಕರೊಂದಿಗೆ ಆಡಿದ ಅನುಭವ ವಿಭಿನ್ನ. ಎಲ್ಲರಿಂದಲೂ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಆ ಕಲಿಕೆಗಳೇ ನನ್ನ ಅನುಭವಗಳು‘ ಎಂದು ಸಚಿನ್ ನುಡಿದರು.
’ಗುರಿ ಮತ್ತು ಕನಸುಗಳ ಈಡೇರಿಕೆಗೆ ಶ್ರಮಿಸುವುದನ್ನು ನಿಲ್ಲಿಸಬಾರದು. ಸತತವಾಗಿ ಅವುಗಳ ಬೆನ್ನತ್ತಬೇಕು. ಒಂದಿಲ್ಲೊಂದಿ ದಿನ ಯಶಸ್ಸು ಖಚಿತ. ಶ್ರಮ, ಶ್ರದ್ಧೆಯಿಂದಲೇ ಸಫಲತೆ ಸಾಧ್ಯ‘ ಎಂದರು.