ನವದೆಹಲಿ: ಭೀಕರ ರಸ್ತೆ ಅಪಘಾತದಲ್ಲಿ ಅದೃಷ್ಟವಶಾತ್ ಪಾರಾಗಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಈಗ, ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನ ಮಾಡಲು ಸಜ್ಜಾಗಿದ್ದಾರೆ.
2022ರ ಡಿಸೆಂಬರ್ 30ರಂದು ಹೊಸ ವರ್ಷಾಚರಣೆಗೆ ಮನೆಗೆ ತೆರಳಿ ಅಮ್ಮನಿಗೆ ಅಚ್ಚರಿ ಉಂಟು ಮಾಡಲು ಬಯಿಸದ್ದ ರಿಷಭ್ ಪಂತ್ ಅವರ ಪ್ರಯಾಣ ಭೀಕರ ಅಪಘಾತದಲ್ಲಿ ಕೊನೆಗೊಂಡಿತ್ತು. ಉತ್ತರಾಖಂಡದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುತ್ತಿದ್ದ ಪಂತ್ ಅವರಿದ್ದ ಮರ್ಸಿಡೀಸ್ ಬೆಂಝ್ ಕಾರು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು. ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಆರಿಸುವ ಮುನ್ನವೇ ಹೊರಬಂದ ಕಾರಣ ಪಂತ್ ಬದುಕುಳಿದಿದ್ದರು. ಗಂಭೀರವಾಗಿ ಗಾಯಗೊಂಡ ಪಂತ್ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು.
ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಪಂತ್, ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಗಷ್ಟೇ ಅಂತ್ಯಗೊಂಡಿರುವ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿರುವ ಪಂತ್ ತಮ್ಮ ಫಿಟ್ನೆಸ್ ಸಾಬೀತು ಮಾಡಿದ್ದರು.
'ಧವನ್ ಕರೆಂಗೆ' ಕಾರ್ಯಕ್ರಮದಲ್ಲಿ ಪಂತ್ ತಮ್ಮ ನೋವಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಶಿಖರ್ ಧವನ್ ಅವರೊಂದಿಗೆ ಟಾಕ್ ಶೋ ನಡೆಸಿದ ಪಂತ್, 'ಅಪಘಾತವು ನನ್ನ ಬದುಕನ್ನೇ ಬದಲಾಯಿಸಿತು' ಎಂದು ತಿಳಿಸಿದ್ದಾರೆ.
'ಅಪಘಾತದ ಬಳಿಕ ನನಗೆ ಪ್ರಜ್ಞೆ ಬಂದಾಗ ನಾನು ಬದುಕುಳಿಯಲಿದ್ದೇನೆ ಎಂಬುದು ತಿಳಿದಿರಲಿಲ್ಲ. ಆದರೆ ದೇವರ ದಯೆಯಿಂದ ಹೊಸ ಬದುಕು ಸಿಕ್ಕಿದೆ' ಎಂದು ಹೇಳಿದ್ದಾರೆ.
'ವೀಲ್ಚೇರ್ನಲ್ಲಿ ಜನರನ್ನು ಎದುರಿಸುವ ಭಯದಿಂದಾಗಿ ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿರಲಿಲ್ಲ. ಎರಡು ತಿಂಗಳು ಹಲ್ಲುಜ್ಜಲು ಸಾಧ್ಯವಾಗಿರಲಿಲ್ಲ. ಏಳು ತಿಂಗಳವರೆಗೂ ನೋವನ್ನು ಅನುಭವಿಸಿದ್ದೇನೆ' ಎಂದು ಹೇಳಿದ್ದಾರೆ.