ಹೋವ್, ಇಂಗ್ಲೆಂಡ್: ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್ಮನ್ಗಳು ಸಿಡಿಸಿದ ಅರ್ಧಶತಕಗಳ ಬಲದಿಂದ ಭಾರತದ 19 ವರ್ಷದೊಳಗಿನವರ ತಂಡದವರು ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಕೌಂಟಿ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ನಲ್ಲಿ ಭಾರತ ತಂಡವು 6 ವಿಕೆಟ್ಗಳಿಂದ ಬಾಂಗ್ಲಾದೇಶವನ್ನು ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಅಕ್ಬಲ್ ಅಲಿ ಮುಂದಾಳತ್ವದ ಬಾಂಗ್ಲಾ 50 ಓವರ್ಗಳಲ್ಲಿ 261ರನ್ ದಾಖಲಿಸಿತು. ಈ ಗುರಿಯನ್ನು ಪ್ರಿಯಂ ಗರ್ಗ್ ಸಾರಥ್ಯದ ಭಾರತ 48.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮುಟ್ಟಿತು.
ಯಶಸ್ವಿ ಜೈಸ್ವಾಲ್ (50; 72ಎ, 6ಬೌಂ) ಮತ್ತು ದಿವ್ಯಾಂಶ್ ಸಕ್ಸೇನಾ (55; 65ಎ, 5ಬೌಂ) ಭಾರತ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್ಗೆ 104ರನ್ ಸೇರಿಸಿ ಗರ್ಗ್ ಪಡೆಯ ಗೆಲುವಿನ ಹಾದಿ ಸುಗಮ ಮಾಡಿತು.
23 ಮತ್ತು 26ನೇ ಓವರ್ಗಳಲ್ಲಿ ಕ್ರಮವಾಗಿ ಸಕ್ಸೇನಾ ಮತ್ತು ಜೈಸ್ವಾಲ್ ವಿಕೆಟ್ ಉರುಳಿಸಿದ ರಕೀಬುಲ್ ಹಸನ್, ಬಾಂಗ್ಲಾ ಆಟಗಾರರು ನಿಟ್ಟುಸಿರು ಬಿಡುವಂತೆ ಮಾಡಿದರು. ಕೆ.ಪ್ರಜ್ಞೇಶ್ ಕೂಡ ಬೇಗನೆ ಪೆವಿಲಿಯನ್ ಸೇರಿದ್ದರಿಂದ ಬಾಂಗ್ಲಾ ತಂಡ ಜಯದ ಕನಸು ಕಂಡಿತ್ತು.
ಈ ಹಂತದಲ್ಲಿ ಒಂದಾದ ನಾಯಕ ಪ್ರಿಯಂ (73; 66ಎ, 4ಬೌಂ, 2ಸಿ) ಮತ್ತು ವಿಕೆಟ್ ಕೀಪರ್ ಧ್ರುವ ಜುರೆಲ್ (ಔಟಾಗದೆ 59; 73ಎ, 4ಬೌಂ, 1ಸಿ) ಬಾಂಗ್ಲಾ ಬೌಲರ್ಗಳನ್ನು ಕಾಡಿದರು. ಇವರು ನಾಲ್ಕನೇ ವಿಕೆಟ್ಗೆ 109ರನ್ ಸೇರಿಸಿ ತಂಡವನ್ನು ಜಯದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿದರು.
46ನೇ ಓವರ್ನ ಕೊನೆಯ ಎಸೆತದಲ್ಲಿ ಪ್ರಿಯಂ ಔಟಾದರು. ಬಳಿಕ ಜುರೆಲ್ ಹಾಗೂ ತಿಲಕ್ ವರ್ಮಾ (ಔಟಾಗದೆ 16; 10ಎ, 3ಬೌಂ) ಗೆಲುವಿನ ಶಾಸ್ತ್ರ ಮುಗಿಸಿದರು.