ಬೆಂಗಳೂರು: ಸಂತೋಷ್ ಟ್ರೋಫಿ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ರಾಜ್ಯ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಮೊಹಮ್ಮದ್ ಗೌಸ್ (88) ಅವರು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
ಮುನಿರೆಡ್ಡಿಪಾಳ್ಯದ ಜೆ.ಸಿ.ನಗರ ನಿವಾಸಿಯಾಗಿದ್ದ ಅವರು ತಂಡದಲ್ಲಿ ರಕ್ಷಣಾ ವಿಭಾಗದ ಆಟಗಾರರಾಗಿದ್ದರು. ಸಿಐಎಲ್ ಪರ ಆಡಿದ್ದರು. ಆತ್ಮೀಯ ವಲಯದವರು ಅವರನ್ನು ನೂರ್ ಎಂದೇ ಕರೆಯುತ್ತಿದ್ದರು. 1965ರಲ್ಲಿ ಕೇರಳದ ಕೊಲ್ಲಂನಲ್ಲಿ ಮತ್ತು 1966ರಲ್ಲಿ ಹೈದರಾಬಾದ್ನಲ್ಲಿ ನಡೆದಿದ್ದ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
1965ರಿಂದ 1980ರ ವರೆಗೆ ಸಿಐಎಲ್ ತಂಡದಲ್ಲಿದ್ದ ಗೌಸ್ ಅವರು ಕೃಷ್ಣಾಜಿ ರಾವ್ ಆ್ಯಂಡ್ ಅಮ್ಜದ್ ಖಾನ್–ವಿಠ್ಠರ ರಾವ್ ಟೂರ್ನಿ, ಡಿಸಿಎಂ, ಡುರಾಂಡ್ ಕಪ್, ರೋವರ್ಸ್ ಕಪ್, ಐಎಫ್ಎ ಶೀಲ್ಡ್, ಹೈದರಾಬಾದ್ ನಿಜಾಮ್ ಗೋಲ್ಡ್ ಕಪ್, ಟ್ರಿಚಿ ಕಪ್ ಮುಂತಾದ ಟೂರ್ನಿಗಳಲ್ಲಿ ಕಣಕ್ಕೆ ಇಳಿದಿದ್ದರು.
ಅವರಿದ್ದ ಸಿಐಎಲ್ ತಂಡ 1973ರಲ್ಲಿ ಸ್ಟಾಫರ್ಡ್ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸಿತ್ತು. ಬಿಡಿಎಫ್ಎ ಲೀಗ್ ಚಾಂಪಿಯನ್ಷಿಪ್ನಲ್ಲಿ 4 ಬಾರಿ ಚಾಂಪಿಯನ್ ಆಗಿತ್ತು.
ಮೊಹಮ್ಮದ್ ಗೌಸ್ ಅವರ ಪಾರ್ಥಿವ ಶರೀರವನ್ನು ಮುನಿರೆಡ್ಡಿ ಪಾಳ್ಯದಲ್ಲಿರುವ ನಿವಾಸದಲ್ಲಿ (ನಂ–29, ಎರಡನೇ ಕ್ರಾಸ್, ಎಂ.ವಿ.ಬ್ಲಾಕ್ ಚರ್ಚ್ ರೋಡ್ ಜೆ.ಸಿ ನಗರ) ಇರಿಸಲಾಗಿದ್ದು ಕುಡೋಸಾ ಖಬರಸ್ತಾನದಲ್ಲಿ ಮಂಗಳವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ರಾಜ್ಯ ಫುಟ್ಬಾಲ್ ಸಂಸ್ಥೆ ತಿಳಿಸಿದೆ.