ಅಹಮದಾಬಾದ್: ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಿತ್ತವರಿಸಿರುವ ಭಾರತ ತಂಡ, ಭಾನುವಾರ ಇಲ್ಲಿ ಆರಂಭವಾಗುವ ಇಂಟರ್ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ತಜಿಕಿಸ್ತಾನವನ್ನು ಎದುರಿಸಲಿದೆ.
ನಾಲ್ಕು ರಾಷ್ಟ್ರಗಳು ಟೂರ್ನಿಯಲ್ಲಿಭಾಗವಹಿಸುತ್ತಿವೆ. ಸಿರಿಯಾ ಹಾಗೂ ಉತ್ತರ ಕೊರಿಯಾ ಇನ್ನೆರಡು ತಂಡಗಳು.
ಥಾಯ್ಲೆಂಡ್ನಲ್ಲಿ ನಡೆದ ಕಿಂಗ್ಸ್ ಕಪ್ ಟೂರ್ನಿಯಲ್ಲಿ ಭಾರತ ಭರವಸೆಯ ಆಟವಾಡಿತ್ತು. ಆ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ಮುಖ್ಯ ಕೋಚ್ ಸ್ಟಿಮ್ಯಾಚ್ ನೇತೃತ್ವದಲ್ಲಿ ಪಳಗುತ್ತಿರುವ ಭಾರತ, ಕಿಂಗ್ಸ್ ಕಪ್ ಟೂರ್ನಿಯಲ್ಲಿ ಥಾಯ್ಲೆಂಡ್ ತಂಡವನ್ನು ಮಣಿಸಿತ್ತು. ಅದೇ ರೀತಿಯ ಪ್ರದರ್ಶನ ಮುಂದುವರಿಸುವ ವಿಶ್ವಾಸ ಸುನಿಲ್ ಚೆಟ್ರಿ ಪಡೆಯದ್ದು.
ಗುಜರಾತ್ನಲ್ಲಿ ಮೊದಲ ಬಾರಿಗೆ ಪುರುಷರ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿ ನಡೆಯುತ್ತಿದೆ.
‘ಟೂರ್ನಿಯನ್ನು ಆಯೋಜಿಸಲು ಅಹಮದಾಬಾದ್ ಒಂದು ಉತ್ತಮ ಆಯ್ಕೆ. ದೇಶದ ಇತರ ಭಾಗಗಳಲ್ಲೂ ಫುಟ್ಬಾಲ್ ವಿಸ್ತರಿಸಲು ಇದು ಅನುಕೂಲ. ಬಹಳಷ್ಟು ಸಂಖ್ಯೆಯಲ್ಲಿ ಜನರು ಪಂದ್ಯ ವೀಕ್ಷಣೆಗೆ ಆಗಮಿಸಿ, ತಂಡವನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ಭಾರತ ತಂಡದ ಡಿಫೆನ್ಸ್ ಆಟಗಾರ ಸಂದೇಶ್ ಜಿಂಗಾನ್ ಹೇಳಿದರು.
ಭಾರತ ತಂಡದ ಇನ್ನೊಬ್ಬ ಆಟಗಾರ ಅನಿರುದ್ಧ ಥಾಪಾ ಮಾತನಾಡಿ ‘ರಾಷ್ಟ್ರೀಯ ತಂಡವು ಇತ್ತೀಚೆಗೆ ಮುಂಬೈ, ಗೋವಾ, ಕೊಚ್ಚಿ, ಗುವಾಹಟಿಗಳಲ್ಲಿ ಪಂದ್ಯಗಳನ್ನು ಆಡಿದೆ. ಈ ಬಾರಿ ಗುಜರಾತ್ ಅಭಿಮಾನಿಗಳು ನಮಗೆ ಬೆಂಬಲಿಸಲಿದ್ದಾರೆ’ ಎಂದರು.