ಕೊಚ್ಚಿ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಕೇರಳ ಬ್ಲಾಸ್ಟರ್ಸ್ ಕ್ಲಬ್ ಪರ ಆಡುತ್ತಿದ್ದ ಸಂದೇಶ್ ಜಿಂಗಾನ್ ಅವರು ಬುಧವಾರ ತಂಡವನ್ನು ತೊರೆದಿದ್ದಾರೆ. ಭಾರತ ರಾಷ್ಟ್ರೀಯ ತಂಡದ ಡಿಫೆನ್ಸ್ ಆಟಗಾರನಾಗಿರುವ ಸಂದೇಶ್ ಆರು ವರ್ಷಗಳಿಂದ ಬ್ಲಾಸ್ಟರ್ಸ್ ತಂಡದೊಂದಿಗೆ ಇದ್ದರು.
2015ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಸಂದೇಶ್, 36 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಸಂದೇಶ್ ಹಾಗೂ ಬ್ಲಾಸ್ಟರ್ಸ್ ತಂಡ ಈ ನಿರ್ಧಾರಕ್ಕೆ ಬಂದಿವೆ.
2014ರಲ್ಲಿ ಕೇರಳ ಬ್ಲಾಸ್ಟರ್ಸ್ ಕ್ಲಬ್, ಐಎಸ್ಎಲ್ ಟೂರ್ನಿಗೆ ಪ್ರವೇಶಿಸಿತ್ತು. ಅಂದಿನಿಂದಲೂ ಅವರು ತಂಡಕ್ಕೆ ಡಿಫೆನ್ಸ್ ವಿಭಾಗದಲ್ಲಿ ಬಲ ನೀಡಿದ್ದರು. ಕ್ಲಬ್ ಎರಡು ಬಾರಿ ಫೈನಲ್ (2014 ಮತ್ತು 2016) ತಲುಪುವಲ್ಲಿ ಅವರ ಕಾಲ್ಚಳಕವೂ ಇತ್ತು. ಕ್ಲಬ್ ಪರ ಅವರು 76 ಪಂದ್ಯಗಳನ್ನು ಆಡಿದ್ದಾರೆ.
2019–20ರ ಐಎಸ್ಎಲ್ ಟೂರ್ನಿಯನ್ನು ಸಂದೇಶ್ ಅವರ ಅನುಪಸ್ಥಿತಿಯಲ್ಲಿ (ಗಾಯಕ್ಕೆ ತುತ್ತಾಗಿದ್ದರು) ಆಡಿದ್ದ ಬ್ಲಾಸ್ಟರ್ಸ್ ಏಳನೇ ಸ್ಥಾನ ಗಳಿಸಿತ್ತು.