ಬೆಂಗಳೂರು: ಕರ್ನಾಟಕದ ಗ್ರ್ಯಾಂಡ್ಮಾಸ್ಟರ್ ಪ್ರಣವ್ ಆನಂದ್ ಮತ್ತು ಬಂಗಾಳದ ಐಎಂ ನೀಲೇಶ್ ಸಹಾ, ಮೊದಲ ಬೆಂಗಳೂರು ಇಂಟರ್ನ್ಯಾಷನಲ್ ಗ್ರ್ಯಾಂಡ್ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನ ನಂತರ ಗರಿಷ್ಠ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿ ಮುನ್ನಡೆ ಹಂಚಿಕೊಂಡಿದ್ದಾರೆ. ನೀಲೇಶ್ ಮೊದಲ ಬೋರ್ಡ್ನಲ್ಲಿ ಅನುಭವಿ ಜಿಎಂ ನೈಜೆಲ್ ಶಾರ್ಟ್ (ಇಂಗ್ಲೆಂಡ್) ಅವರನ್ನು ಶನಿವಾರ 27 ನಡೆಗಳಲ್ಲಿ ಸೋಲಿಸಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಮೂರನೇ ದಿನವಾದ ಶನಿವಾರ, ಕಪ್ಪುಕಾಯಿ ನಡೆಸಿದ ಪ್ರಣವ್ ಎರಡನೇ ಬೋರ್ಡ್ನಲ್ಲಿ ಮಹಾರಾಷ್ಟ್ರದ ಐಎಂ ಸಮ್ಮೇದ್ ಜಯಕುಮಾರ್ ಅವರನ್ನು 46ನೇ ನಡೆಯಲ್ಲಿ ಸೋಲಿಸಿದರು. 12 ಆಟಗಾರರು (ತಲಾ 3.5) ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಬೆಲಾರಸ್ನ ಗ್ರ್ಯಾಂಡ್ಮಾಸ್ಟರ್ ಅಲೆಕ್ಸಿ ಫೆಡರೋವ್, ಗೋವಾದ ಐಎಂ ನಿತೀಶ್ ಬೇಲೂರ್ಕರ್ ಜೊತೆ 31 ನಡೆಗಳ ನಂತರ ಪಾಯಿಂಟ್ ಹಂಚಿಕೊಳ್ಳಬೇಕಾಯಿತು. ಮೊದಲ ಎಂಟು ಬೋರ್ಡ್ಗಳಲ್ಲಿ ‘ಡ್ರಾ’ ಆಗಿದ್ದು ಇದೊಂದೇ ಪಂದ್ಯ. ಬಂಗಾಳದ ಜಿಎಂ ಮಿತ್ರಬಾ ಗುಹಾ (3.5), ಕರ್ನಾಟಕದ ಐಎಂ ವಿಯಾನಿ ಡಿಕುನ್ಹ (3) ವಿರುದ್ಧ ಜಯಗಳಿಸಿದರು.
ಅಗ್ರ ಶ್ರೇಯಾಂಕದ ಜಿಎಂ ಅಭಿಜಿತ್ ಗುಪ್ತಾ (3.5), ಐಸಿಎಫ್ನ ಆರ್.ಆರ್.ಲಕ್ಷ್ಮಣ್ ವಿರುದ್ಧ ಜಯಗಳಿಸಿದರೆ, ಏಳನೇ ಬೋರ್ಡಿನಲ್ಲಿ ಜಿಎಂ ತೇಜಕುಮಾರ್ (ಕರ್ನಾಟಕ, 2.5), ಬಂಗಾಳದ ಐಎಂ ಅರಣ್ಯಕ್ ಘೋಷ್ (3.5) ಅವರಿಗೆ ಮಣಿದರು. ರಾಷ್ಟ್ರೀಯ ಚಾಂಪಿಯನ್ ಎಸ್.ಪಿ.ಸೇತುರಾಮನ್ (3.5), ತೆಲಂಗಾಣದ ಐಎಂ ಮೋಹನ್ ಕುಶಾಗ್ರ (2.5) ಅವರನ್ನು ಸೋಲಿಸಿದರು.
ಕರ್ನಾಟಕದ ಜಿ.ಎ.ಸ್ಟ್ಯಾನಿ (3), ಇನ್ನೊಂದು ಪಂದ್ಯದಲ್ಲಿ ಫಿಡೆಮಾಸ್ಟರ್ ಎ.ಪಿ.ಜೋಶುವ (2) ವಿರುದ್ಧ ಜಯಗಳಿಸಿದರು. ರಾಜ್ಯದ ಅಪೂರ್ವ ಕಾಂಬ್ಳೆ (2.5) ಅವರು ಬಂಗಾಳದ ಜಿಎಂ ದೀಪ್ತಾಯನ ಘೋಷ್ (2.5) ಜೊತೆ ಪಾಯಿಂಟ್ ಹಂಚಿಕೊಂಡಿದ್ದು ಕಡಿಮೆ ಸಾಧನೆಯಾಗಿರಲಿಲ್ಲ.
ನಾಲ್ಕನೇ ಸುತ್ತಿನಲ್ಲಿ ಮಹಾರಾಷ್ಟ್ರದ ನುಬೇರ್ಶಾ ಶೇಕ್ ಮೊಹಮ್ಮದ್ (2) ಅವರನ್ನು ಸೋಲಿಸಿದ ಕೇರಳದ ಪ್ರತಿಭಾನ್ವಿತ ಗೌತಮ್ ಕೃಷ್ಣ ಮೂರು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ಸೆಲ್ವಮುರುಗನ್ಗೆ ಮುನ್ನಡೆ:
‘ಬಿ’ ಕೆಟಗರಿ (2000ಕ್ಕಿಂತ ಕಡಿಮೆ ರೇಟಿಂಗ್) ಟೂರ್ನಿಯ ಏಳು ಸುತ್ತುಗಳ ನಂತರ ತಮಿಳುನಾಡಿನ ಸೆಲ್ವಮುರುಗನ್ (7 ಪಾಯಿಂಟ್) ಮುನ್ನಡೆಯಲ್ಲಿದ್ದಾರೆ. ತಲಾ ಆರೂವರೆ ಪಾಯಿಂಟ್ಸ್ ಪಡೆದಿರುವ ಓಂಕಾರ್ ಕಾಡವ್ (ಮಹಾರಾಷ್ಟ್ರ), ಜೈದಂಬರೀಶ್ ಎನ್.ಆರ್. ಮತ್ತು ತೆಲಂಗಾಣದ ಅಕುಲ ಪ್ರಣಯ್ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.