ಬರ್ಮಿಂಗ್ಹ್ಯಾಮ್: ಭಾರತ ಪುರುಷರ ಹಾಕಿ ತಂಡವು ಸೋಮವಾರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗಳಿಸಿತು.
ಫೈನಲ್ ಪಂದ್ಯದಲ್ಲಿ ಕಳಪೆ ಆಟವಾಡಿದ ಮನ್ಪ್ರೀತ್ ಸಿಂಗ್ ಬಳಗವು 0–7ರಿಂದ ಬಲಿಷ್ಠ ಆಸ್ಟ್ರೇಲಿಯಾ ತಂಡದ ಎದುರು ಮಣಿಯಿತು. ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್ನಲ್ಲಿ ತಂಡವು ಕಂಚಿನ ಪದಕ ಜಯಿಸಿತ್ತು. ಅದರ ನಂತರದ ಟೂರ್ನಿಗಳಲ್ಲಿಯೂ ಉತ್ತಮವಾಗಿಯೇ ಆಡಿತ್ತು. ಆದರೆ ಈ ಪಂದ್ಯದಲ್ಲಿ ಮಂಕಾಯಿತು.
ಎಂಟು ವರ್ಷಗಳ ನಂತರ ಕಾಮನ್ವೆಲ್ತ್ ಕೂಟದಲ್ಲಿ ಪದಕ ಗಳಿಸಿತು. 2010ರಲ್ಲಿ ನವದೆಹಲಿ ಹಾಗೂ 2014ರಲ್ಲಿ ಗ್ಲಾಸ್ಗೊದಲ್ಲಿಯೂ ತಂಡವು ಬೆಳ್ಳಿ ಪದಕ ಗಳಿಸಿತ್ತು. 1998ರಲ್ಲಿ ಕೂಟದಲ್ಲಿ ಮೊದಲ ಬಾರಿಗೆ ಹಾಕಿ ಸೇರ್ಪಡೆಯಾಗಿತ್ತು. ಆಗಿನಿಂದ ಮೂರು ಬಾರಿ ಫೈನಲ್ ಪ್ರವೇಶಿಸಿತ್ತು.
ಇಡೀ ಟೂರ್ನಿಯಲ್ಲಿ ತಂಡದ ಸಾಧನೆ ಉತ್ತಮವಾಗಿತ್ತು. ಆದರೆ, ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾದ ರಕ್ಷಣಾ ಕೋಟೆಯನ್ನು ದಾಟುವಲ್ಲಿಯೂ ವಿಫಲವಾಯಿತು. ಅನುಭವಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಅವರನ್ನೂ ಆಸ್ಟ್ರೇಲಿಯಾ ಆಟಗಾರರು ವಂಚಿಸಿ ಗೋಲು ಗಳಿಸುವಲ್ಲಿ ಸಫಲರಾದರು.