ನವದೆಹಲಿ: ಆಡಳಿತ ಸಮಿತಿಯನ್ನು (ಸಿಒಎ) ನೇಮಿಸಿ ದೆಹಲಿ ಹೈಕೋರ್ಟ್ ಹೊರಡಿಸಿದ ಆದೇಶದ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಭಾರತ ಒಲಿಂಪಿಕ್ ಸಮಿತಿ (ಐಒಎ) ಬುಧವಾರ ಸಭೆ ನಡೆಸಿತು.
ಆದರೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕೇ ಎಂಬ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ.
ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ, ಖಜಾಂಚಿ ಆನಂದೇಶ್ವರ್ ಪಾಂಡೆ ಅವರು ಸಭೆಯಲ್ಲಿ ಪಾಲ್ಗೊಂಡರು. ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ ವಿದೇಶದಲ್ಲಿದ್ದು, ವರ್ಚವಲ್ ಆಗಿ ಭಾಗವಹಿಸಿದರು.
‘ಹೈಕೋರ್ಟ್ ಆದೇಶವನ್ನು ವಿವರವಾಗಿ ತಿಳಿದುಕೊಳ್ಳಲು ಬುಧವಾರ ಆಂತರಿಕ ಸಭೆ ನಡೆಸಿದ್ದೇವೆ. ಗುರುವಾರ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದು, ಸುಪ್ರೀಂ ಕೋರ್ಟ್ ಮೊರೆಹೋಗುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ರಾಜೀವ್ ಮೆಹ್ತಾ ತಿಳಿಸಿದರು.