ನವದೆಹಲಿ: ಹೊಸದಾಗಿ ನೇಮಕಗೊಂಡ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ರಘುರಾಮ್ ಅಯ್ಯರ್ ಮೇಲೆ ಸಂಪೂರ್ಣ ವಿಶ್ವಾಸವಿದೆ ಮತ್ತು ಉನ್ನತ ಹುದ್ದೆಗೆ ಅವರನ್ನು ನೇಮಿಸಿರುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಭಾನುವಾರ ಪ್ರತಿಪಾದಿಸಿದರು.
ರಘುರಾಮ್ ಅವರ ನೇಮಕವನ್ನು ಅನೂರ್ಜಿತ ಎಂದು ಘೋಷಿಸುವ ಅಮಾನತು ಆದೇಶಕ್ಕೆ ಐಒಎ ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರು ಸಹಿ ಹಾಕಿದ್ದಾರೆ ಎಂದು ವರದಿಗಳು ಹೇಳಿದ್ದವು.
ಐಒಎ ಜನವರಿ 6 ರಂದು ರಾಜಸ್ಥಾನ ರಾಯಲ್ಸ್ನ ಮಾಜಿ ಅಧಿಕಾರಿ ಅಯ್ಯರ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿತ್ತು.
ಆದರೆ, ಕಾರ್ಯಕಾರಿ ಸಮಿತಿಯ ಹಲವಾರು ಸದಸ್ಯರು, ಸಿಇಒ ಆಗಿ ಅಯ್ಯರ್ ಅವರನ್ನೇ ಶಿಫಾರಸು ಮಾಡಲು ಉಷಾ ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು. 15 ಸದಸ್ಯರಲ್ಲಿ 12 ಮಂದಿ ಸಿಇಒ ನೇಮಕಾತಿಯನ್ನು ಉನ್ನತ ಸಂಸ್ಥೆ ಅನುಮೋದಿಸಿಲ್ಲ ಎಂದು ಹೇಳಿದರು.
ಈ ಆರೋಪವನ್ನು ಉಷಾ ‘ನಾಚಿಕೆಗೇಡಿನದು’ ಎಂದು ಟೀಕಿಸಿದ್ದರು.
ದೆಹಲಿ ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಅಸೋಸಿಯೇಷನ್ (ಡಿಎಸ್ಜೆಎ) ಮತ್ತು ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಜೆಎಫ್ಐ) ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಷಾ, ‘ಸಿಇಒ ಅವರನ್ನು ಸರಿಯಾದ ರೀತಿಯಲ್ಲಿ ನೇಮಕ ಮಾಡಿದ್ದೇನೆ ಮತ್ತು ಅವರು ಕೆಲಸ ಮಾಡುತ್ತಿದ್ದಾರೆ. ತಪ್ಪು ಕೆಲಸ ಮಾಡಿದಾಗ, ಭಯಪಡಬೇಕು. ಸರಿಯಾಗಿ ಕೆಲಸ ಮಾಡುತ್ತಿರುವಾಗ ಅದರ ಬಗ್ಗೆ ಏಕೆ ಚಿಂತಿಸಬೇಕು’ ಎಂದರು.
ಸದಸ್ಯರ ವಿರೋಧದ ನಡುವೆಯೂ ಅವರು ಮುಂದುವರೆಯುತ್ತಾರೆಯೇ ಎಂಬ ಪ್ರಶ್ನೆಗೆ, ‘ಅವರು ಶೇಕಡಾ 100 ರಷ್ಟು ಮುಂದುವರಿಯುತ್ತಾರೆ. ಅವರು ಉತ್ತಮ ಸಿಇಒ ಮತ್ತು ಐಒಸಿಗೆ ಉತ್ತಮ ಅಧಿಕಾರಿಗಳು ಮಾತ್ರ ಬೇಕು‘ ಎಂದು ಪ್ರತಿಕ್ರಿಯಿಸಿದರು.
ಇದೇ ವೇಳೆ ಎಸ್ಜೆಎಫ್ಐ ಮತ್ತು ಡಿಎಸ್ಜೆಐ ವತಿಯಿಂದ ಪಿ.ಟಿ. ಉಷಾ ಅವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
‘ನನ್ನ ವೃತ್ತಿಜೀವನದ ಸಾಧನೆಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತಿರುವುದಕ್ಕೆ ಆಭಾರಿಯಾಗಿದ್ದೇನೆ. ಈಗ ಕ್ರೀಡಾಪಟುಗಳಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳು ನನ್ನ ಅವಧಿಯಲ್ಲಿ ಇರಲಿಲ್ಲ. ಈಗ ನಾನು ಐಒಎಯಲ್ಲಿ ಕೆಲಸ ಮಾಡುತ್ತಿದ್ದೇನೆ, ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಗಮನ ಹರಿಸುವುದು ನಮ್ಮ ಪ್ರಯತ್ನವಾಗಿದೆ’ ಎಂದು ಉಷಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.