ತುಮಕೂರು: ಬೆಂಗಳೂರಿನ ಮಾನಸಾ ಕೆ. ಅವರು ಭಾನುವಾರ ಮುಕ್ತಾಯಗೊಂಡ ರಾಜ್ಯ ಮಹಿಳಾ ಚೆಸ್ ಪಂದ್ಯಾವಳಿಯಲ್ಲಿ ಅಜೇಯ ಸಾಧನೆಯೊಡನೆ ಪ್ರಶಸ್ತಿ ಗೆದ್ದು ಕೊಂಡರು. ಅವರು ಒಟ್ಟು 9 ಸುತ್ತುಗಳಿಂದ ಎಂಟು ಪಾಯಿಂಟ್ಸ್ ಸಂಗ್ರಹಿಸಿದರು.
ಶಿರಾ ರಸ್ತೆಯ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮೂರು ದಿನಗಳ ಈ ಟೂರ್ನಿಯಲ್ಲಿ ಬೆಂಗಳೂರಿನ ಕೃಪಾ ಎಸ್.ಉಕ್ಕಲಿ ಮತ್ತು ಶ್ರೇಯಾ ರಾಜೇಶ್ ತಲಾ ಏಳು ಪಾಯಿಂಟ್ಸ್ ಸಂಗ್ರಹಿಸಿದರು. ಆದರೆ ಟೈಬ್ರೇಕ್ ಆಧಾರದ ಮೆಲೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ದಕ್ಷಿಣ ಕನ್ನಡದ ಆರುಷಿ ಸೆವೆರಿನ್ ಹೆಲೆನ್ ಡಿ ಸಿಲ್ವ (6.5) ನಾಲ್ಕನೇ ಸ್ಥಾನ ಪಡೆದರು. ಮೊದಲ ಮೂವರು ಕ್ರಮವಾಗಿ ಟ್ರೋಫಿ ಜೊತೆಗೆ ₹12,000, 10,500, 9,500 ನಗದು ಬಹುಮಾನ ಪಡೆದರು. ಆರುಷಿ ₹9,000 ನಗದು ಬಹುಮಾನ ಗಳಿಸಿದರು.
ಈ ನಾಲ್ವರೂ ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರೀಯ ಮಹಿಳಾ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅರ್ಹತೆ ಪಡೆದರು. ಉಡುಪಿಯ ಆರಾಧ್ಯ ಎಸ್.ಶೆಟ್ಟಿ, ಮಂಡ್ಯದ ಎ.ಎನ್.ಶೆಫಾಲಿ ಮತ್ತು ಮೈಸೂರಿನ ಗಂಗಮ್ಮ ಬಿ.ಎನ್., ಬೆಂಗಳೂರಿನ ವೇದಾಂಶಿ ಪಾಂಡೆ (ಎಲ್ಲರೂ ತಲಾ 6.5) ಐದರಿಂದ ಎಂಟರವರೆಗಿನ ಸ್ಥಾನಗಳನ್ನು ಪಡೆದರು. ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆ ಹಾಗೂ ತುಮಕೂರು ಚೆಸ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಈ ಪಂದ್ಯಾವಳಿ ನಡೆಯಿತು.