ನವದೆಹಲಿ: ಕುವೈತ್ನಲ್ಲಿ ಈಚೆಗೆ ನಡೆದ ಏಷ್ಯಾ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಆಯೋಜಕರು ಟ್ರ್ಯಾಪ್ ಶೂಟರ್ ಮಾನವಜಿತ್ ಸಿಂಗ್ ಅವರನ್ನು ಅನರ್ಹಗೊಳಿಸಿರುವುದನ್ನು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್ಆರ್ಎಐ) ವಿರೋಧಿಸಿದೆ.
‘ಈ ಕ್ರಮವು ಪಕ್ಷಪಾತ ಧೋರಣೆಯಾಗಿದ್ದು, ಅನ್ಯಾಯವಾಗಿದೆ‘ ಎಂದು ಸಂಸ್ಥೆಯು ಖಂಡಿಸಿದೆ.
ದೋಷಪೂರಿತ ಬಂದೂಕು ದಾಸ್ತಾನು ಕಾರಣದಿಂದಾಗಿ ಮಾಜಿ ವಿಶ್ವ ಚಾಂಪಿಯನ್ ಸಿಂಗ್ ಅವರನ್ನು ಸ್ಪರ್ಧೆಯಿಂದ ನಿಷೇಧಿಸುವಾಗ ಏಷ್ಯನ್ ಶೂಟಿಂಗ್ ಕಾನ್ಫೆಡರೇಶನ್ (ಎಎಸ್ಸಿ) ಉಲ್ಲೇಖಿಸಿದ ನಿಯಮಗಳು ‘ಆಧಾರರಹಿತ’ ಮತ್ತು ‘ಕ್ಷುಲ್ಲಕ’ ಎಂದು ಎನ್ಆರ್ಎಐ ಹೇಳಿದೆ.
ಮಾನವಜಿತ್ ಅವರಿಗೆ ಶನಿವಾರ ಸ್ಪರ್ಧಾಪೂರ್ವ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ ಮತ್ತು ಭಾನುವಾರ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು.
‘ತಾಂತ್ರಿಕ ನಿರ್ದೇಶಕ ಅಬ್ದುಲ್ಲಾ ಹಮೀದಿ ರಾಜಕೀಯ ಮಾಡುತ್ತಿದ್ದಾರೆ‘ ಎಂದು ಮಾನವಜಿತ್ ಶನಿವಾರ ಆರೋಪಿಸಿದ್ದರು.