ಮುಂಬೈ: ವಿಶ್ವಕಪ್ ಟೂರ್ನಿಯಲ್ಲಿ ಐದು ಶತಕ ಗಳಿಸಿ ವಿಶ್ವದಾಖಲೆ ಬರೆದ ಭಾರತದ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಭಾನುವಾರ ಬೆಳಗಿನ ಜಾವ ಮುಂಬೈಗೆ ಮರಳಿದರು. ಆದರೆ, ವಿಮಾನ ನಿಲ್ದಾಣದಿಂದಲೇ ಅವರು ಟೀಕೆಗಳನ್ನು ಎದುರಿಸಬೇಕಾಯಿತು.
ಅಚ್ಚರಿಯೆಂದರೆ ತಂಡದ ಸೋಲಿನ ಕುರಿತ ಯಾವ ಟೀಕೆಯೂ ಅದರಲ್ಲಿ ಇರಲಿಲ್ಲ. ಬದಲಿಗೆ ರೋಹಿತ್ ಮತ್ತು ರಿತಿಕಾ ಸಜ್ದೆ ದಂಪತಿಯು ’ಬೇಜವಾಬ್ದಾರಿ ಪಾಲಕರು’ ಎಂಬ ಟೀಕೆಗೆ ಗುರಿಯಾದರು. ವಿಮಾನ ನಿಲ್ದಾಣದಿಂದ ಹೊರಬಂದ ಅವರು ತಮ್ಮ ಎಸ್ಯುವಿ ಕಾರ್ ಅನ್ನು ಚಾಲನೆ ಮಾಡಲು ಅಣಿಯಾದರು.
ಚಾಲಕನ ಪಕ್ಕದ ಆಸನದಲ್ಲಿ ರಿತಿಕಾ ಅವರು ತಮ್ಮ ಮಗು ಸಮೈರಾಳನ್ನು ತಮ್ಮ ಕಾಲುಗಳ ಮೇಲೆ ಕೂರಿಸಿಕೊಂಡು ಕುಳಿತರು.
ಇದನ್ನು ನೋಡಿದ ಟೋನಿ ಎಂಬುವವರು, ‘ಮೂರ್ಖತನ ಮಾಡಬೇಡಿ. ಮಗುವಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿಕೊಂಡಿಲ್ಲವೇಕೆ?’ ಎಂದು ಟ್ವೀಟ್ ಮಾಡಿದರು.ಅದರ ಬೆನ್ನಲ್ಲಿಯೇ ಹಲವರು ಅದಕ್ಕೆ ಪ್ರತಿಕ್ರಿಯಿಸಿದರು.
‘ಮುಂದಿನ ಸೀಟ್ನಲ್ಲಿ ತಮ್ಮ ತೊಡೆಯ ಮೇಲೆ ಮಗುವನ್ನು ಕೂರಿಸಿಕೊಂಡಿದ್ದಾರೆ. ಎಂತಹ ಬೇಜವಾಬ್ದಾರಿತನ ಇದು. ಅದರಲ್ಲೂ ಭಾರತದಲ್ಲಿ ಜನರು ಚಾಲನೆ ಮಾಡುವ ರೀತಿಯನ್ನು ನೋಡಿದರೆ ಭಯವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.