ಬೆಂಗಳೂರು: ಎರಡು ವರ್ಷಗಳ ‘ಕೋವಿಡ್ ಬ್ರೇಕ್‘ ನಂತರ ಉದ್ಯಾನನಗರಿಗೆ ‘ಓಟದ ಗಮ್ಮತ್ತು’ ಮರಳಿದೆ. ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ವಿಶ್ವ 10ಕೆ ರನ್ ಸಂಭ್ರಮ ಭಾನುವಾರ ಗರಿಗೆದರಲಿದೆ.
ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಪ್ರಾಯೋಜಕತ್ವದಲ್ಲಿ ನಡೆಯಲಿರುವ 10 ಕಿ.ಮೀ ವಿಭಾಗದ ಓಟಕ್ಕೆ ಪ್ರಪಂಚದ ಪ್ರಮುಖ ಅಥ್ಲೀಟ್ಗಳುಸಾಕ್ಷಿಯಾಗಲಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಎಲೀಟ್ ಸ್ಪರ್ಧೆಯು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಾಗಿ ಕಂಠೀರವ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ. ಎಲ್ಲ ವಿಭಾಗಗಳ ಸ್ಪರ್ಧೆಗಳು ಸೇರಿ 19 ಸಾವಿರಕ್ಕಿಂತ ಹೆಚ್ಚಿನ ಅಥ್ಲೀಟ್ಗಳು ನೋಂದಾಯಿಸಿಕೊಂಡಿದ್ದಾರೆ.
2019ರಲ್ಲಿ ಕೊನೆಯ ಬಾರಿ ಸ್ಪರ್ಧೆ ನಡೆದಿತ್ತು. ಕೋವಿಡ್ ಕಾರಣದಿಂದಾಗಿ ಎರಡು ವರ್ಷ (2020 ಮತ್ತು 2021) ಆನ್ಲೈನ್ ಮೂಲಕ ನೋಂದಾಯಿಸಿಕೊಂಡ ಸ್ಪರ್ಧಿಗಳು ತಾವಿದ್ದ ಸ್ಥಳದಿಂದಲೇ ಪಾಲ್ಗೊಂಡಿದ್ದರು.
ಬೆಂಗಳೂರು 10ಕೆ ಪುರುಷರ ವಿಭಾಗದ ಹಾಲಿ ಚಾಂಪಿಯನ್ ಇಥಿಯೋಪಿಯಾದ ಅಂಡಮಾಕ್ ಬೆಲಿಹು ಈ ಬಾರಿಯೂ ಚಿನ್ನದ ಪದಕ ಜಯಿಸುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ. ದೆಹಲಿ ಹಾಫ್ ಮ್ಯಾರಥಾನ್ ಅನ್ನು ಎರಡು ಬಾರಿ ಜಯಿಸಿರುವ ಅವರಿಗೆ ತಮ್ಮದೇ ದೇಶದ ಮುಖ್ತಾರ್ ಇದ್ರಿಸ್ ಪ್ರಮುಖ ಸವಾಲಾಗುವ ನಿರೀಕ್ಷೆಯಿದೆ. 2017 ಮತ್ತು 2019ರ ವಿಶ್ವ ಚಾಂಪಿಯನ್ಷಿಪ್ನ 5000 ಮೀಟರ್ಸ್ ವಿಭಾಗದಲ್ಲಿ ಪ್ರಶಸ್ತಿ ಹಿರಿಮೆ ಅವರದು. ಕೀನ್ಯಾದ ಕಿಬಿವೊಟ್ ಕ್ಯಾಂಡಿ ಇವರಿಬ್ಬರನ್ನು ಮೀರಿಸುವ ಛಲದಲ್ಲಿದ್ದಾರೆ. ಕೆನ್ಯಾದ ಹೆಲೆನ್ ಒಬಿರಿ ಮತ್ತು ಇರೇನ್ ಚೆಪ್ಟಾಯ್ ಮಹಿಳಾ ವಿಭಾ ಗದಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ಭಾರತದ ಎಲೀಟ್ ಪುರುಷರ ವಿಭಾಗದಲ್ಲಿ ಶ್ರೀನು ಭುಗಾತಾ, ಕರ್ನಾಟಕದ ಎ.ಬಿ. ಬೆಳ್ಳಿಯಪ್ಪ ಮತ್ತು ಕಾರ್ತಿಕ್ಕುಮಾರ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್ ಸಂಜೀವನಿ ಜಾಧವ್, ಪಾರುಲ್ ಚೌಧರಿ ಮತ್ತು ಕವಿತಾ ಯಾದವ್ ಪದಕದ ನಿರೀಕ್ಷೆಯಲ್ಲಿದ್ದಾರೆ.