ನವದೆಹಲಿ: ರಾಷ್ಟ್ರೀಯ ಸೈಕ್ಲಿಂಗ್ ಶಿಬಿರವು ಇದೇ 14ರಂದು ಆರಂಭವಾಗಲಿದ್ದು, ಅದಕ್ಕೂ ಮುನ್ನ ಎಲ್ಲ ಸೈಕ್ಲಿ್ಸ್ಟ್ಗಳು, ನೆರವು ಸಿಬ್ಬಂದಿಯ ಕೋವಿಡ್–19 ಪರೀಕ್ಷೆ ನಡೆಸಲಾಯಿತು. ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಶನಿವಾರ ತಿಳಿಸಿದೆ.
11 ಸೈಕ್ಲಿಸ್ಟ್ಗಳು, ನಾಲ್ವರು ಕೋಚ್ಗಳು ಹಾಗೂ 16 ಮಂದಿಯ ನೆರವು ಸಿಬ್ಬಂದಿಯ ತಂಡ ಈಗಾಗಲೇ ತರಬೇತಿ ಶಿಬಿರಕ್ಕೆ ಸೇರಲು ವರದಿ ಮಾಡಿಕೊಂಡಿದ್ದಾರೆ. ಇಲ್ಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶಿಬಿರ ನಡೆಯಲಿದ್ದು, ಅದಕ್ಕೂ ಮೊದಲು ಸೈಕ್ಲಿಂಗ್ ತಂಡವು ಕ್ವಾರಂಟೈನ್ಗೆ ಒಳಗಾಗುವುದು ಕಡ್ಡಾಯ.
‘ಶಿಬಿರಕ್ಕೆ ಆಗಮಿಸುವ ಎಲ್ಲ ಕ್ರೀಡಾಪಟುಗಳು, ಕೋಚ್ಗಳು, ನೆರವು ಸಿಬ್ಬಂದಿಗೆ (ಕೆಲಸದವರು, ಅಡುಗೆಯವರು ಸೇರಿ) ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಅವರೆಲ್ಲರ ಫಲಿತಾಂಶದ ವರದಿ ‘ನೆಗೆಟಿವ್‘ ಬಂದಿದೆ‘ ಎಂದು ಸಾಯ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಅಥ್ಲೀಟುಗಳು, ಕೋಚ್ಗಳು ಹಾಗೂ ನೆರವು ಸಿಬ್ಬಂದಿ ಕ್ವಾರಂಟೈನ್ಗೆ ಒಳಗಾಗಲಿರುವ ಪ್ರದೇಶವನ್ನು ಹಸಿರು ವಲಯ ಎಂದು ಗುರುತಿಸಲಾಗಿದೆ. ಸಂಪೂರ್ಣ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಹೊರಗಿನವರಿಗೆ ಈ ವಲಯ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದೆ‘ ಎಂದು ಪ್ರಕಟಣೆ ತಿಳಿಸಿದೆ.
‘ತುರ್ತು ಆರೋಗ್ಯ ಪರಿಸ್ಥಿತಿ ನಿಭಾಯಿಸುವ ಸಂಬಂಧ ಹೆಚ್ಚುವರಿಯಾಗಿ ಒಬ್ಬ ವೈದ್ಯ ಹಾಗೂ ಶುಶ್ರೂಷಾ ಸಿಬ್ಬಂದಿಯನ್ನೂ ವ್ಯವಸ್ಥೆ ಮಾಡಲಾಗಿದೆ. ಸಾಯ್ ಹಾಗೂ ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ‘ ಎಂದು ಸಾಯ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.