ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ವಿಶ್ವಕಪ್ ವಿಜಯಕ್ಕೆ 45ರ ಹೊಳಪು

Last Updated 15 ಮಾರ್ಚ್ 2020, 21:11 IST
ಅಕ್ಷರ ಗಾತ್ರ

ನವದೆಹಲಿ: ಅಜಿತ್ ಪಾಲ್ ಸಿಂಗ್ ನಾಯಕತ್ವದ ಹಾಕಿ ತಂಡವು ಭಾರತಕ್ಕೆ ಹಾಕಿ ವಿಶ್ವಕಪ್ ಗೆದ್ದುಕೊಟ್ಟ ಆ ಸುವರ್ಣ ಗಳಿಗೆಗೆ ಈಗ 45 ವರ್ಷ ತುಂಬಿದೆ.

1975ರಲ್ಲಿ ಕ್ವಾಲಾಲಂಪುರದಲ್ಲಿ ಭಾರತ ತಂಡವು ವಿಶ್ವಕಪ್ ಹಾಕಿ ಫೈನಲ್‌ನಲ್ಲಿ 2–1ರಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಜಯಿಸಿತ್ತು. ಅದಕ್ಕೂ ಎರಡು ವರ್ಷಗಳ ಮುನ್ನ 1973ರಲ್ಲಿ ಸೋತಿದ್ದ ದುಃಖವನ್ನು ಭಾರತ ಮರೆತಿತ್ತು. ಅಸ್ಲಂ ಶೇರ್ ಖಾನ್ ಮತ್ತು ಅಶೋಕಕುಮಾರ್ ಧ್ಯಾನಚಂದ್ ಅವರು ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳ ಜಯದ ರೂವಾರಿಗಳಾಗಿದ್ದರು.

‘1973ರಲ್ಲಿ ಗೆಲುವಿನ ಸನಿಹ ಬಂದು ಸೋತಿದ್ದೆವು. ಹೆಚ್ಚುವರಿ ಸಮಯದಲ್ಲಿ ಒಂದು ಗೋಲು ಹೊಡೆಯುವ ಅವಕಾಶವನ್ನು ನಾನು ಕೈಚೆಲ್ಲಿದ್ದೆ. ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹೊಡೆಯುವ ಅವಕಾಶವನ್ನೂ ನಾವು ಕಳೆದುಕೊಂಡಿದ್ದೆವು. ಆದರೆ 1975ರಲ್ಲಿ ಜಯಿಸಲೇಬೇಕೆಂಬ ಛಲದಲ್ಲಿ ಆಡಿದ್ದು ಫಲ ನೀಡಿತ್ತು’ ಎಂದು ಅಶೋಕಕುಮಾರ್ ನೆನಪಿಸಿಕೊಳ್ಳುತ್ತಾರೆ. ಅವರು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಮಗ.

‘ಆ ಟೂರ್ನಿಗಿಂತ ಮುನ್ನ ಚಂಡೀಗಡದಲ್ಲಿ ತರಬೇತಿ ಶಿಬಿರ ಇತ್ತು. ಅಲ್ಲಿ ನಮ್ಮ ಅಭ್ಯಾಸವನ್ನು ನೋಡಲು ದೊಡ್ಡ ಪ್ರಮಾಣದಲ್ಲಿ ಜನರು ಸೇರುತ್ತಿದ್ದರು. ಆ ಸಂದರ್ಭದಲ್ಲಿ ಗ್ಯಾನಿ ಜೇಲ್‌ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದರು. ಅವರು ಮತ್ತು ಕ್ರೀಡಾ ಸಚಿವ ಉಮ್ರಾವ್ ಸಿಂಗ್ ಅವರು ವಾರದಲ್ಲಿ ಎರಡು ಬಾರಿ ಶಿಬಿರಕ್ಕೆ ಭೇಟಿ ನೀಡುತ್ತಿದ್ದರು. ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು’ ಎಂದು ಅಶೋಕಕುಮಾರ್ ಹೇಳುತ್ತಾರೆ.

ಆ ಟೂರ್ನಿಯ ಸೆಮಿಫೈನಲ್‌ನಲ್ಲಿ ಆತಿಥೇಯ ಮಲೇಷ್ಯಾ ಎದುರು ಭಾರತ ತಂಡವು ಹಣಾಹಣಿ ನಡೆಸಿತ್ತು. ತಂಡದ ಮ್ಯಾನೇಜರ್ ಬಲಬೀರ್ ಸಿಂಗ್ ಸೀನಿಯರ್ ಆ ಸಂದರ್ಭದಲ್ಲಿ ಅಸ್ಲಂ ಶೇರ್ ಖಾನ್ ಅವರನ್ನು ಕಣಕ್ಕಿಳಿಸಿದ್ದು ಫಲ ನೀಡಿತ್ತು. ಸ್ಕೋರ್ ಸಮಬಲಗೊಳಿಸುವಲ್ಲಿ ಅಸ್ಲಂ ಯಶಸ್ವಿಯಾಗಿದ್ದರು. ಇದರಿಂದ ಹೆಚ್ಚುವರಿ ಸಮಯಕ್ಕೆ ಪಂದ್ಯ ಲಂಬಿಸಿತ್ತು. ಭಾರತ 3–2ರಲ್ಲಿ ಜಯಿಸಿತ್ತು.

‘ಆ ಗೋಲು ಗಳಿಸಿದ ಕ್ಷಣವನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ನಾವು ಟೂರ್ನಿಗೆ ಹೋಗಿದ್ದೇ ಕಪ್ ಗೆಲ್ಲಲು. ಆ ಉದ್ದೇಶಕ್ಕೆ ನನ್ನ ಗೋಲು ನೆರವಾಗಿತ್ತು. ಸೆಮಿಫೈನಲ್‌ನಲ್ಲಿ ಗಳಿಸಿದ ಜಯವು ನಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು. ಪಾಕ್ ತಂಡವು ಬಲಿಷ್ಠವಾಗಿತ್ತು. ಆದರೆ ಫೈನಲ್‌ನಲ್ಲಿ ಆ ತಂಡವನ್ನು ನಾವು ಮಣಿಸಿ ಇತಿಹಾಸ ಬರೆದೆವು’ ಎಂದು ಅಸ್ಲಂ ಶೇರ್ ಖಾನ್ ನೆನಪಿಸಿಕೊಳ್ಳುತ್ತಾರೆ.

‘ಅಂದು ನಾವು ಗೆದ್ದು ಬಂದಾಗ ಯಾರೂ ಕರೆದು ಅಭಿನಂದಿಸಲಿಲ್ಲ. ವಿಜಯೋತ್ಸವ ದೂರದ ಮಾತು. ಇವತ್ತು ಬಹಳಷ್ಟು ಜನರಿಗೆ ಆ ಸಾಧನೆಯ ನೆನಪು ಕೂಡ ಇಲ್ಲ. ಕ್ರಿಕೆಟ್‌ ಕ್ರೇಜ್‌ ತುಂಬಿ ತುಳುಕುವ ಈ ದೇಶದಲ್ಲಿ ಹಾಕಿ ಹೀರೊಗಳನ್ನು ಯಾರು ನೆನಪಿಡುತ್ತಾರೆ?’ ಎಂದು ಅಶೋಕಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT