ಭುವನೇಶ್ವರ : ’ಹಿಮ್ಮಡಿ ನೋವಿನಿಂದ ಬಳಲಿ ಕಂಗಾಲಾಗಿದ್ದಾಗ ತಂಡಕ್ಕೆ ಮರಳುವ ಭರವಸೆಯನ್ನೇ ಕಳೆದುಕೊಂಡಿದ್ದೆ. ಆದರೆ ಈಗ ಖುಷಿಯಾಗಿದೆ’ ಎಂದು ಭಾರತ ಹಾಕಿ ತಂಡದ ಆಟಗಾರ ಚಿಂಗ್ಲೆನ್ಸಾನ ಸಿಂಗ್ ಕಂಗುಜಂ ಅಭಿಪ್ರಾಯಪಟ್ಟರು.
ಮಣಿಪುರದ ಈ ಮಿಡ್ಫೀಲ್ಡರ್ ಕಳೆದ ವರ್ಷ ನಡೆದಿದ್ದ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ ವೇಳೆ ಗಾಯಗೊಂಡಿದ್ದರು. ಟೂರ್ನಿಯಲ್ಲಿ ಅವರು ಪ್ರತಿನಿಧಿಸಿದ್ದ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು.
‘ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ದಿನಗಳು ಅತ್ಯಂತ ಕಠಿಣವಾಗಿದ್ದವು. ಆ ಸಂದರ್ಭದಲ್ಲಿ ದೇಹದ ಕೆಳಭಾಗಕ್ಕೆ ಹೆಚ್ಚು ಕೆಲಸ ಕೊಡಲು ಸಾಧ್ಯವಾಗದ ಕಾರಣ ತೂಕ ಐದರಿಂದ ಆರು ಕೆಜಿ ಹೆಚ್ಚಾಗಿತ್ತು’ ಎಂದು ಅವರು ಹೇಳಿದರು.
2018ರ ಎಫ್ಐಎಚ್ ವಿಶ್ವಕಪ್ ಟೂರ್ನಿಯಲ್ಲಿ ಅವರು ಕೊನೆಯದಾಗಿ ಭಾರತದ ಜೆರ್ಸಿ ತೊಟ್ಟಿದ್ದರು.