ಹುಬ್ಬಳ್ಳಿ: ಧಾರವಾಡದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರದಿಂದದೇಶಿ ಕ್ರೀಡೆ ಕಬಡ್ಡಿಯನ್ನು ಹೊರರಾಜ್ಯಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಯನ್ನು ಕೇಂದ್ರ ಕ್ರೀಡಾ ಇಲಾಖೆ ಕೈಬಿಟ್ಟಿದ್ದು, ಧಾರವಾಡದಲ್ಲೇ ಈ ಕ್ರೀಡೆಗೆ ಸಂಬಂಧಿಸಿದ ತರಬೇತಿ ಮುಂದುವರಿಯಲಿದೆ.
ರಾಜ್ಯದಲ್ಲಿ ಬೆಂಗಳೂರು, ಧಾರ ವಾಡ ಮತ್ತು ಮಡಿಕೇರಿಯಲ್ಲಿ ಸಾಯ್ ಕೇಂದ್ರಗಳಿವೆ. ಇದರಲ್ಲಿ ಬೆಂಗಳೂರು ಮತ್ತು ಧಾರವಾಡದಲ್ಲಿ ಮಾತ್ರ ಕಬಡ್ಡಿಗೆ ತರಬೇತಿ ನೀಡಲಾಗುತ್ತಿತ್ತು. ತರಬೇತುದಾರರ ಕೊರತೆಯ ನೆಪವೊಡ್ಡಿ ಹೊರರಾಜ್ಯಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆದಿತ್ತು.
ಇದರಿಂದ ಅಸಮಾಧಾನಗೊಂಡಿದ್ದ ಉತ್ತರ ಕರ್ನಾಟಕ ಭಾಗದ ಕಬಡ್ಡಿ ಕೋಚ್ಗಳು ಮತ್ತು ಜಿಲ್ಲಾ ಕಬಡ್ಡಿ ಸಂಸ್ಥೆಯ ಪದಾಧಿಕಾರಿಗಳು ಸ್ಥಳಾಂತರಕ್ಕೆ ಅವಕಾಶ ಕೊಡಬಾರದುಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಮಾಡಿದ್ದರು.
ಈ ಕುರಿತು 2019ರಸೆ. 28ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಈಗ ಕೇಂದ್ರ ಕ್ರೀಡಾ ಇಲಾಖೆ ಸಾಯ್ ಕೇಂದ್ರಗಳಲ್ಲಿ ತರಬೇತಿ ನೀಡಬೇಕಾದ ಕ್ರೀಡೆಗಳ ಪಟ್ಟಿ ಪ್ರಕಟಿಸಿದ್ದು, ಧಾರವಾಡ ಕೇಂದ್ರದಲ್ಲಿ ಕಬಡ್ಡಿ ಮುಂದುವರಿಸಲಾಗಿದೆ. 15 ಬಾಲಕರಿಗೆ ತರಬೇತಿ ನೀಡಲು ಅವಕಾಶ ಕಲ್ಪಿಸಿದೆ.
ಈ ಕ್ರೀಡೆಯ ಜೊತೆಗೆ ಬ್ಯಾಸ್ಕೆಟ್ಬಾಲ್ನಲ್ಲಿ 20, ಟೇಕ್ವಾಂಡೊದಲ್ಲಿ 20 ಮತ್ತು ಕುಸ್ತಿಯಲ್ಲಿ 35 ಕ್ರೀಡಾಪಟುಗಳಿಗೆ ತರಬೇತಿಗೂ ಅವಕಾಶ ಕಲ್ಪಿಸಿದೆ.
ಮಡಿಕೇರಿ ಸಾಯ್ ಕೇಂದ್ರದಲ್ಲಿ 60 ಬಾಲಕಿಯರಿಗೆ ಹಾಕಿ ಮತ್ತು ಬೆಂಗಳೂರು ಕೇಂದ್ರದಲ್ಲಿ 45 ಹಾಕಿ ಆಟಗಾರರಿಗೆ ಮತ್ತು 10 ಮಂದಿ ಟೇಕ್ವಾಂಡೊ ಕ್ರೀಡಾಪಟುಗಳಿಗೆ ತರ ಬೇತಿ ನೀಡುವಂತೆ ತಿಳಿಸಿದೆ.
‘ಉತ್ತರ ಕರ್ನಾಟಕದ ಏಕೈಕ ಸಾಯ್ ಕೇಂದ್ರದಲ್ಲಿ ಕಬಡ್ಡಿ ಕಲಿಯಲು ಸಾಕಷ್ಟು ಆಟಗಾರರು ಕಾಯುತ್ತಿರು ತ್ತಾರೆ. ಅವರಿಗೆ ಸ್ಥಳೀಯವಾಗಿ ತರಬೇತಿಗೆ ಅವಕಾಶ ಸಿಗದಿದ್ದರೆ ಹೊರರಾಜ್ಯಕ್ಕೆ ಹೋಗಬೇಕಾಗುತ್ತಿತ್ತು. ಪ್ರಲ್ಹಾದ ಜೋಶಿ ಅವರ ಪ್ರಯತ್ನದಿಂದ ಕಬಡ್ಡಿ ಇಲ್ಲಿಯೇ ಉಳಿದಿದೆ. ವರದಿ ಪ್ರಕಟಿಸಿದ ಪ್ರಜಾವಾಣಿಗೆ ಧನ್ಯವಾದ’ ಎಂದುಧಾರವಾಡ ಸಾಯ್ ಕೇಂದ್ರದ ನಿವೃತ್ತ ನಿರ್ದೇಶಕ ಈಶ್ವರ ಅಂಗಡಿ ಹರ್ಷ ವ್ಯಕ್ತಪಡಿಸಿದರು.