ಪುಣೆ: ಮಿಂಚಿನ ಗತಿಯಲ್ಲಿ ಗುರಿಯತ್ತ ಮುನ್ನುಗ್ಗಿದ ಕರ್ನಾಟಕದ ಸಿ.ಜೆ.ಸಂಜಯ್, ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಶನಿವಾರ ನಡೆದ 17 ವರ್ಷದೊಳಗಿನ ಬಾಲಕರ 400 ಮೀಟರ್ಸ್ ಫ್ರೀಸ್ಟೈಲ್ನಲ್ಲಿ ಸಂಜಯ್ 4 ನಿಮಿಷ 13.36 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಸಂಭ್ರಮಿಸಿದರು.
ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೋಹಿತ್ ವೆಂಕಟೇಶ್ ಕಂಚಿನ ಪದಕ ಜಯಿಸಿದರು. ಅವರು ನಿಗದಿತ ದೂರ ಕ್ರಮಿಸಲು 4 ನಿಮಿಷ 17.78 ಸೆಕೆಂಡು ತೆಗೆದುಕೊಂಡರು.
ಪಿ.ಕುಶಾಲ್ (4:23.24ಸೆ.) ಮತ್ತು ಶಾಂಭವ್ (4:26.41ಸೆ.) ಕ್ರಮವಾಗಿ ಐದು ಮತ್ತು ಏಳನೇ ಸ್ಥಾನ ಪಡೆದರು.
100 ಮೀಟರ್ಸ್ ಬಟರ್ಫ್ಲೈ ವಿಭಾಗದಲ್ಲಿ ಕಣದಲ್ಲಿದ್ದ ಪ್ರಸಿದ್ಧ ಕೃಷ್ಣ (59.99ಸೆ.) ಏಳನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.
ಬಾಲಕರ 4X100 ಮೀಟರ್ಸ್ ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕ (4:08.06ಸೆ.) ಕಂಚಿನ ಪದಕ ಪಡೆಯಿತು.
21 ವರ್ಷದೊಳಗಿನ ಬಾಲಕರ 100 ಮೀಟರ್ಸ್ ಬಟರ್ಫ್ಲೈಯಲ್ಲಿ ಅವಿನಾಶ್ ಮಣಿ ಬೆಳ್ಳಿಯ ಪದಕ ಗೆದ್ದರು. ಅವರು 57.30 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.
ಮಹಿಳೆಯರ 100 ಮೀಟರ್ಸ್ ಫ್ರೀಸ್ಟೈಲ್ನಲ್ಲಿ ದೀಕ್ಷಾ ರಮೇಶ್ 1 ನಿಮಿಷ 02.68 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಪದಕ ಪಡೆದರು. ಎಚ್.ಎಂ.ಪ್ರೇಕ್ಷಾ (1:04.12ಸೆ.) ಮತ್ತು ಎಸ್.ವಿ.ನಿಕಿತಾ (1:07.22ಸೆ.) ಕ್ರಮವಾಗಿ ನಾಲ್ಕು ಮತ್ತು ಏಳನೇ ಸ್ಥಾನಗಳಿಗೆ ತೃಪ್ತಿಪಟ್ಟರು.
4X100 ಮೀಟರ್ಸ್ ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್, ಅವಿನಾಶ್ ಮಣಿ, ಶಿವ ಶ್ರೀಧರ್ ಮತ್ತು ಎಸ್.ಪಿ.ಲಿಖಿತ್ ಅವರಿದ್ದ ಕರ್ನಾಟಕ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿತು.
ಫೈನಲ್ನಲ್ಲಿ ಕರ್ನಾಟಕ 3 ನಿಮಿಷ 56.38 ಸೆಕೆಂಡುಗಳ ಸಾಮರ್ಥ್ಯ ತೋರಿತು.
ಶ್ರೀನಿವಾಸ್ಗೆ ಬೆಳ್ಳಿ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಇ.ಶ್ರೀನಿವಾಸ್ ಬೆಳ್ಳಿಯ ಪದಕ ಜಯಿಸಿದರು.
ದಾವಣಗೆರೆ ಕ್ರೀಡಾ ಹಾಸ್ಟೆಲ್ನ ಶ್ರೀನಿವಾಸ್, 21 ವರ್ಷದೊಳಗಿನ ವಿಭಾಗದ 74 ಕೆ.ಜಿ. ಸ್ಪರ್ಧೆಯ ಫೈನಲ್ನಲ್ಲಿ ಸೋತರು.