ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿದ ಶ್ರೀಕಾಂತ್‌, ಸೈನಾ ಒಲಿಂಪಿಕ್ಸ್ ಕನಸು

ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ನಲ್ಲಿ ಬದಲಾವಣೆ ಇಲ್ಲ: ಬಿಡಬ್ಲ್ಯುಎಫ್‌ ಘೋಷಣೆ
Last Updated 28 ಮೇ 2021, 11:09 IST
ಅಕ್ಷರ ಗಾತ್ರ

ನವದೆಹಲಿ: ರ‍್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಶುಕ್ರವಾರ ಘೋಷಿಸಿದೆ. ಇದರೊಂದಿಗೆ, ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರ ಆಸೆ ಕಮರಿದೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಅವಕಾಶವಿದ್ದ ಮೂರು ಟೂರ್ನಿಗಳನ್ನು ಕೊರೊನಾ ಕಾರಣದಿಂದ ಈಚೆಗೆ ರದ್ದುಗೊಳಿಸಲಾಗಿತ್ತು. ಹೀಗಾಗಿ ರ‍್ಯಾಂಕಿಂಗ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಎಂದು ನಿರೀಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಿದಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ನಿರೀಕ್ಷೆಯಿಂದ ಕಾಯುತ್ತಿದ್ದರು.

‘ಟೋಕಿಯೊ ಒಲಿಂಪಿಕ್ಸ್‌ನ ಅರ್ಹತಾ ಅವಧಿ ಜೂನ್ 15ರಂದು ಮುಕ್ತಾಯಗೊಳ್ಳಲಿದೆ. ಆದರೆ ಅದಕ್ಕೂ ಮುನ್ನ ಯಾವುದೇ ಟೂರ್ನಿಯನ್ನು ಆಯೋಜಿಸಲಾಗುವುದಿಲ್ಲ. ರ‍್ಯಾಂಕಿಂಗ್‌ನಲ್ಲಿ ಬದಲಾವಣೆಯೂ ಇಲ್ಲ. ಆದ್ದರಿಂದ ಒಲಿಂಪಿಕ್ಸ್‌ಗೆ ಈಗಿನ ರ‍್ಯಾಂಕಿಂಗ್ ಪ್ರಕಾರವೇ ಆಟಗಾರರನ್ನು ಆಯ್ಕೆ ಮಾಡಬೇಕು’ ಎಂದು ಬಿಡಬ್ಲ್ಯುಎಫ್‌ ಹೇಳಿದೆ.

ಇಂಡಿಯಾ ಓಪನ್, ಮಲೇಷ್ಯಾ ಓಪನ್ ಮತ್ತು ಸಿಂಗಪುರ ಓಪನ್ ಟೂರ್ನಿಗಳನ್ನು ರದ್ದುಮಾಡಿದ್ದ ಬಿಡಬ್ಲ್ಯುಎಫ್‌ ಅರ್ಹತಾ ಅವಧಿಯನ್ನು ಮೂರು ತಿಂಗಳು ಮುಂದೂಡಿತ್ತು. ಮುಂದಿನ ತಿಂಗಳ 15ರ ವರೆಗೆ ಅರ್ಹತಾ ಅವಧಿ ಇದ್ದರೂ ತಾಂತ್ರಿಕವಾಗಿ ಒಲಿಂಪಿಕ್ಸ್‌ಗೆ ಟಿಕೆಟ್ ಗಳಿಸುವ ಅವಕಾಶ ಈಗಲೇ ಮುಗಿದಿದೆ ಎಂದು ಬಿಡಬ್ಲ್ಯುಎಫ್‌ ಪ್ರಧಾನ ಕಾರ್ಯದರ್ಶಿ ಥಾಮಸ್ ಲೂಂಡ್ ಹೇಳಿದ್ದಾರೆ.

ಭಾರತದ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್, ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರು ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT