ರಾಯಚೂರು: ನಗರದ ಮಾಣಿಕಪ್ರಭು ಅಂಧರ ಶಾಲೆಯಲ್ಲಿ ಎರಡು ದಿನಗಳ ರಾಜ್ಯಮಟ್ಟದ ಅಂಧರ ಚೆಸ್ ಸ್ಪರ್ಧೆ–2022 ಶನಿವಾರದಿಂದ ಆರಂಭವಾಗಿದೆ.
ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳಿಂದ 108 ಸ್ಪರ್ಧಿಗಳು ಭಾಗವಹಿಸಿದ್ದು, ಸಾಮಾನ್ಯಶ್ರೇಣಿ, ಮಹಿಳೆಯರಿಗಾಗಿ, ಶಾಲಾ ವಿದ್ಯಾರ್ಥಿಗಳಿಗೆ, ಅತಿಹಿರಿಯ ಮತ್ತು ಅತಿಕಿರಿಯ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿವೆ.
ಶಾಸಕ ಡಾ.ಶಿವರಾಜ ಪಾಟೀಲ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ರಾಯಚೂರಿನ ಶ್ರೀ ಮಾಣಿಕಪ್ರಭು ಅಕಾಡೆಮಿ ಫಾರ್ ಬ್ಲೈಂಡ್ ಹಾಗೂ ಕರ್ನಾಟಕ ಅಂಧರ ಚದುರಂಗ ಸಂಸ್ಥೆಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಪಡೆದವರು ಮುಂದಿನ ತಿಂಗಳು ಹೊನ್ನಾವರದಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಗೆ ಅರ್ಹರಾಗುವರು.
ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ನಗರದ ಲಾಡ್ಜ್ಗಳಲ್ಲಿ ಉಳಿದುಕೊಳ್ಳುವುದಕ್ಕೆ ಮತ್ತು ಊಟದ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದಾರೆ. ಭಾನುವಾರ ಅಂತಿಮ ಸುತ್ತಿನ ಚೆಸ್ ಸ್ಪರ್ಧೆಗಳು ನಡೆಯಲಿವೆ.