ಬೆಂಗಳೂರು: ತಮಿಳುನಾಡಿನ ಸಂತೋಷ್ ಕುಮಾರ್ ಹಾಗೂ ಸಹಚಾಲಕ ನಾಗರಾಜನ್, ವಿನಯ ಕುಮಾರ್ ಮತ್ತು ರವಿ ಕುಮಾರ್ ಜೋಡಿ ಜೆ.ಕೆ ಟಯರ್ ಪ್ರಾಯೋಜಿತ ಎಫ್ಎಂಎಸ್ಸಿಐ ರಾಷ್ಟ್ರೀಯ ರೆಗ್ಯುಲಾರಿಟಿ ರನ್ ಚಾಂಪಿಯನ್ಷಿಪ್ನ ದಕ್ಷಿಣ ವಲಯದ ಎರಡನೇ ಸುತ್ತಿನಲ್ಲಿ ಗೌರವ ಹಂಚಿಕೊಂಡರು.
ಹಂಪಿಯಲ್ಲಿ ಸೋಮವಾರ ಮುಕ್ತಾಯಗೊಂಡ ರೇಸ್ನಲ್ಲಿ ಮೂರು ಬಾರಿಯ ರಾಷ್ಟ್ರೀಯ ಚಾಂಪಿಯನ್ ಈರೋಡ್ನ ಕಾರ್ತಿಕ್ ಮಾರುತಿ ಹಾಗೂ ಶಂಕರ್ ಆನಂದ್ ಎರಡನೇ ಸ್ಥಾನ ಗಳಿಸಿದರು. ಕೀರ್ತಿ ಪ್ರಸಾದ್ ಹಾಗೂ ಸಹಚಾಲಕ ಶಕ್ತಿವೇಲು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಬೆಂಗಳೂರಿನ ಮಹಿಳಾ ಟೆಕ್ಕಿಗಳಾದ ಅಪರ್ಣ ಪಾಠಕ್ ಹಾಗೂ ಲಲಿತ ಗೌಡ ಮಹಿಳಾ ವಿಭಾಗದ ಎರಡೂ ಸುತ್ತುಗಳಲ್ಲಿ ಗೆಲುವು ಸಾಧಿಸಿ ಪ್ರಬಲ ಎದುರಾಳಿಗಳನ್ನು ಹಿಂದಿಕ್ಕಿ ಕಾರ್ಪೊರೇಟ್ ವಿಭಾಗದ ಮೊದಲ ಸುತ್ತನ್ನು ಗೆದ್ದುಕೊಂಡರು. ಮಂಗಳೂರಿನ ಅಶ್ವಿನ್ ಪಿಂಟೊ ಹಾಗೂ ಸಂದೀಪ್ ಡಿ‘ಸಿಲ್ವಾ ಕರ್ನಾಟಕದ ಭರವಸೆ ಎನಿಸಿಕೊಂಡರು. ತಂದೆ ಮಗ ಜೋಡಿ ಅನಿಲ್ ಮತ್ತು ಅಮಲ್ ಅಬ್ಬಾಸ್ ಅವರು ಕಾರ್ಪೊರೇಟ್ ವಿಭಾಗದ ಎರಡನೇ ಸುತ್ತಿನಲ್ಲಿ ಜಯ ಸಾಧಿಸಿದರು.